Breaking News: ‘ದೀರ್ಘಾಯುಷ್ಯ ಸಂಶೋಧನಾ ಕೇಂದ್ರಕ್ಕೆ’ ನಟ ಡಾ. ಪುನೀತ್ ರಾಜ್ ಕುಮಾರ್ ಹೆಸರು ಸಚಿವ ಅಶ್ವತ್ಥನಾರಾಯಣ ಘೋಷಣೆ

ಬೆಂಗಳೂರು: ಅಕಾಲಿಕ ಮರಣವನ್ನು ತಡೆಯಲು ದೀರ್ಘಾಯುಷ್ಯ ಮತ್ತು ಸಾಂಕ್ರಾಮಿಕ ರೋಗಗಳಿಗೆ ಔಷಧಿ ಕಂಡುಹಿಡಿಯುವ ಸದುದ್ದೇಶದಿಂದ ಸದ್ಯದಲ್ಲೇ ಎಲೆಕ್ಟ್ರಾನಿಕ್ ಸಿಟಿಯಲ್ಲಿ ‘ದೀರ್ಘಾಯುಷ್ಯ’ ಮತ್ತು ಸಾಂಕ್ರಾಮಿಕ ರೋಗ ಪರಿಹಾರ ಸಂಶೋಧನಾ ಕೇಂದ್ರಗಳನ್ನು ತೆರೆಯಲಾಗುವುದು.
ಈ ಪೈಕಿ ದೀರ್ಘಾಯುಷ್ಯ ಸಂಶೋಧನಾ ಕೇಂದ್ರಕ್ಕೆ ಇತ್ತೀಚೆಗೆ ನಮ್ಮನ್ನು ಅಗಲಿದ ನಟ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಡಲಾಗುವುದು ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಐಟಿ ಮತ್ತು ಬಿಟಿ ಇಲಾಖೆಯ ಪ್ರತಿಷ್ಠಿತ ಉಪಕ್ರಮವಾದ `ಬೆಂಗಳೂರು ಬಯೋ-ಇನ್ನೋವಶನ್ ಸೆಂಟರ್’ (ಬಿಬಿಸಿ)ನ ಬೆಂಬಲದ ಮೂಲಕ ವಿವಿಧ ನವೋದ್ಯಮಗಳು ಅಭಿವೃದ್ಧಿಪಡಿಸಿರುವ 6 ಜೀವವಿಜ್ಞಾನ ಸಾಧನಗಳನ್ನು ಅವರು ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಹೆಲಿಕ್ಸ್ ಬಿಟಿ ಪಾರ್ಕ್ ನಲ್ಲಿ ಗುರುವಾರ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಸಾಂಕ್ರಾಮಿಕ/ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ರಕ್ತ, ಎಂಜಲು, ಮಲ, ಮೂತ್ರ, ಕಫ ಇತ್ಯಾದಿಗಳನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಬೇಕಾಗಿದೆ. ಇದಕ್ಕಾಗಿ, ಬಿಬಿಸಿ ಉಪಕ್ರಮದಡಿಯಲ್ಲಿ ದೇಶದ ಮೊಟ್ಟಮೊದಲ ಬಯೋ-ಬ್ಯಾಂಕಿಂಗ್ ಮತ್ತು ಸಂಗ್ರಹ ಮಾದರಿಗಳ ಕೋಶವನ್ನು ಕೂಡ ಸ್ಥಾಪಿಸಲಾಗುವುದು.
ಇದರಿಂದ ಇಡೀ ರಾಜ್ಯದಲ್ಲಿ ರೋಗನಿದಾನ ಶಾಸ್ತ್ರವು ಮತ್ತಷ್ಟು ವೈಜ್ಞಾನಿಕವಾಗಿ ನಡೆಯಲಿದೆ’ ಎಂದು ನುಡಿದರು. ಈ ಮೂರು ಕೇಂದ್ರಗಳು ಎಲೆಕ್ಟ್ರಾನಿಕ್ ಸಿಟಿಯ ಬಿಬಿಸಿ ಯಲ್ಲೆ ಸ್ಥಾಪಿಸಲಾಗುವುದು ಎಂದರು.
ಆರೋಗ್ಯ ಕ್ಷೇತ್ರದಲ್ಲಿ ಆವಿಷ್ಕಾರದ ಅಗತ್ಯವಿದೆ. ಇಂದು ಬಿಡುಗಡೆಯಾಗಿರುವ ಸಾಧನಗಳಿಂದ ಡಿಎನ್ಎ/ಆರ್.ಎನ್.ಎ ಪರೀಕ್ಷೆಗಳು, ಕೋವಿಡ್ ಸ್ವಯಂ ಪರೀಕ್ಷೆ, ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ, ವರ್ಚುಯಲ್ ರಿಯಾಲಿಟಿ ವಿಧಾನದಲ್ಲಿ ಕಣ್ಣಿನ ಪರೀಕ್ಷೆ, ಶ್ವಾಸಕೋಶ ಮತ್ತು ಹೃದಯದ ಮೇಲಿನ ಒತ್ತಡಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಪತ್ತೆ ಹಚ್ಚಬಹುದು ಎಂದು ಸಚಿವರು ಮಾಹಿತಿ ನೀಡಿದರು.
ಬಿಬಿಸಿ ಉಪಕ್ರಮದ ಮೂಲಕ ಇದುವರೆಗೂ 150ಕ್ಕೂ ಹೆಚ್ಚು ನವೋದ್ಯಮಗಳು ಮತ್ತು ವೈಯಕ್ತಿಕ ಉದ್ಯಮಿಗಳಿಗೆ ಸರಕಾರದ ನಾನಾ ಯೋಜನೆಗಳ ಮೂಲಕ ರಚನಾತ್ಮಕ ಬೆಂಬಲ ನೀಡಲಾಗಿದೆ. ಸದ್ಯಕ್ಕೆ 50 ನವೋದ್ಯಮಗಳಿಗೆ ಇದರ ಮುಖಾಂತರ ಪರಿಪೋಷಣೆಯನ್ನು ಒದಗಿಸಲಾಗುತ್ತಿದೆ. ಅಲ್ಲದೆ, ಕೋವಿಡ್ ಸಾಂಕ್ರಾಮಿಕದ ಪರಿಣಾಮಕಾರಿ ನಿರ್ವಹಣೆಗೆ ನೆರವು ನೀಡುವಂತಹ 22 ಉತ್ಪನ್ನಗಳನ್ನು ಕೇವಲ ಎರಡು ವರ್ಷಗಳಲ್ಲಿ ಸಾರ್ವಜನಿಕ ಉಪಯೋಗಕ್ಕೆ ಬಿಡುಗಡೆ ಮಾಡಲಾಗಿದೆ’ ಎಂದರು.
ಬಿಬಿಸಿ ಪರಿಪೋಷಣೆ ಪಡೆದಿರುವ ಕಂಪನಿಗಳ ಮೌಲ್ಯವು 800 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. ಇದರ ಜೊತೆಗೆ, 1,000ಕ್ಕೂ ಹೆಚ್ಚು ಉದ್ಯೋಗಗಳು ಕೂಡ ಇಲ್ಲಿ ಸೃಷ್ಟಿಯಾಗಿವೆ. ಜೀವವಿಜ್ಞಾನಗಳ ಅಡಿ ಬರುವ ಆರೋಗ್ಯ ರಕ್ಷಣೆ, ಬಯೋಫಾರ್ಮಾ, ಕೃಷಿ, ಆಹಾರ ಮತ್ತು ಪೌಷ್ಟಿಕತೆ, ಔದ್ಯಮಿಕ ಮತ್ತು ಪರಿಸರ ಜೈವಿಕ ತಂತ್ರಜ್ಞಾನ ಮತ್ತು ಮೆಡ್-ಟೆಕ್ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಉದ್ಯಮಿಗಳ ಅಗತ್ಯಗಳನ್ನು ಗಮನಿಸಿ, ಅವುಗಳನ್ನು ಸುಗಮವಾಗಿ ಪೂರೈಸಲು ಈ ಕೇಂದ್ರದ ಮೂಲಕ ಮಹತ್ತ್ವದ ನೆರವು ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.