
ಇಪ್ಪತ್ತೈದಕ್ಕೂ ಹೆಚ್ಚು ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ, ರಾಜಕೀಯ ಮುಖಂಡರ ಸಂಬಂಕನೆಂದು ಹೇಳಿಕೊಂಡಿರುವ ಕುಖ್ಯಾತ ದರೋಡೆಕೋರನನ್ನು ಡಿಜೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರ ರೌಡಿಯೂ ಆಗಿರುವ ಆರೋಪಿ ಮನ್ಸೂರ್ ಅಹಮದ್ (22)ವಕೀಲರನ್ನೇ ಟಾರ್ಗೆಟ್ ಮಾಡಿ ಕಾರು ಹಾಗೂ ಇತರೆ ವಸ್ತುಗಳನ್ನು ದರೋಡೆ ಮಾಡುವ ಪ್ರವೃತ್ತಿ ಉಳ್ಳವನಾಗಿರುತ್ತಾನೆ.
ವಕೀಲರೊಬ್ಬರ ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಲಕ್ಷ ಮೌಲ್ಯದ ಕಾರು ಹಾಗು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಕೀಲರಾದ ಆಶಾಕ್ ಅಹಮದ್ ಎಂಬುವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸಂಬಂಧಿ ಮನೆಗೆಂದು ಕನಕನಗರಕ್ಕೆ ಹೋಗಿ ವಾಪಸ್ ಮಧ್ಯರಾತ್ರಿ ಮನೆಗೆ ಹಿಂದಿರುಗುತ್ತಿದ್ದಾಗ ನಾಲ್ವರು ದರೋಡೆಕೋರರು ಏಕಾಏಕಿ ಇವರ ಕಾರನ್ನು ಅಡ್ಡಗಟ್ಟಿದ್ದಾರೆ.
ಕಾರಿನ ಡೋರ್ ಎಳೆದು ಆಶಾಕ್ ಅಹಮದ್ ಅವರನ್ನು ಕಾರಿನಿಂದ ಹೊರಗೆ ಎಳೆದು ಹಲ್ಲೆ ಮಾಡಿದ್ದಾರೆ. ಅಲ್ಲದೆ ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆ ಮಾಡಿ ಪರ್ಸ್ ಹಾಗೂ ಎರಡು ಮೊಬೈಲ್ಗಳು, ಕಾರನ್ನು ಕಿತ್ತುಕೊಂಡು ಹೋಗಿದ್ದರು. ಈ ಬಗ್ಗೆ ಡಿಜೆಹಳ್ಳಿ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ದರೋಡೆಕೋರರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಒಬ್ಬಾತನನ್ನು ಬಂಧಿಸಿದ್ದಾರೆ.
ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ ಮತ್ತು ಕೆಜಿಹಳ್ಳಿ ಉಪವಿಭಾಗದ ಎಸಿಪಿ ಜಗದೀಶ್ ಅವರ ಮಾರ್ಗದರ್ಶನದಲ್ಲಿ ಡಿಜೆಹಳ್ಳಿ ಠಾಣೆ ಇನ್ಸ್ಪೆಕ್ಟರ್ ಪ್ರಕಾಶ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.