
ಹಾಸನದ ಕುವೆಂಪುನಗರ ಕೊರಿಯರ್ ಸೆಂಟರ್ನಲ್ಲಿ ನಡೆದಿದ್ದ ಮಿಕ್ಸಿ ಬ್ಲಾಸ್ಟ್ ಪ್ರಕರಣ ಉಗ್ರಗಾಮಿ ಕೃತ್ಯ ಅಲ್ಲ, ವಿಚ್ಛೇದಿತ ಮಹಿಳೆಯ ಹಿಂದೆ ಬಿದ್ದ ಪ್ರೇಮಿಯೊಬ್ಬನ ಕೃತ್ಯ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.
ಹಾಸನದ ಮಹಿಳೆ ವಸಂತಾ ವಿವಾಹ ವಿಚ್ಛೇದನ ನಂತರ ಮ್ಯಾಟ್ರಿಮೋನಿಯಲ್ಲಿ ತನ್ನ ಫೋಟೋ ಅಪ್ಲೋಡ್ ಮಾಡಿದ್ದಳು, ಇದನ್ನು ನೋಡಿ ಬೆಂಗಳೂರು ಮೂಲದ ಅನೂಪ್ ಮದುವೆ ಪ್ರಸ್ತಾಪ ಮಾಡಿದ್ದನು.
ಅನೂಪ್ ಪ್ರಸ್ತಾಪ ಒಪ್ಪಿಕೊಂಡು ಮಹಿಳೆ ಆತನ ಜೊತೆ ಓಡಾಡಿ ವಿಶ್ವಾಸ ಗಳಿಸಿ ಲಕ್ಷಾಂತರ ರೂ. ಪಡೆದಿದ್ದಳು. ಇತ್ತೀಚೆಗೆ ಅನೂಪ್ ಕೊಟ್ಟ ಹಣ ವಾಪಸ್ ನೀಡದೆ, ಮದುವೆಯೂ ಆಗದೆ ಆತನಿಂದ ಅಂತರ ಕಾಯ್ದುಕೊಂಡಿದ್ದಳು.
ಅನೂಪ್ ಮದುವೆಯಾಗಬೇಕು ಇಲ್ಲವೇ ಹಣ ವಾಪಾಸ್ ನೀಡಬೇಕು ಎಂದು ಆಕೆಯ ಬೆನ್ನು ಬಿದ್ದಿದ್ದನು. ಅನೂಪ್ ವಿರುದ್ಧ ಪೊಲೀಸರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಮಹಿಳೆ ವಸಂತಾ ದೂರು ನೀಡಿದ್ದಳು. ಕೆರಳಿದ ಅನೂಪ್ ಆಕೆಯನ್ನು ಮುಗಿಸೋಕೆ ಪ್ಲಾನ್ ಮಾಡಿದ್ದನು.
ಮೊದಲು ಸೀರೆ ಕಳುಹಿಸಿದ್ದನು. ಸೀರೆಯನ್ನು ವಾಪಾಸ್ ಕಳುಹಿಸಿ ಆಕೆ ಅನೂಪ್ನನ್ನು ನಿಂದಿಸಿದ್ದಳು. ಮತ್ತೆ ಮಿಕ್ಸಿಯಲ್ಲಿ ಡಿಟೋನೇಟರ್ ಇಟ್ಟು ಕಳಿಸಿದ್ದ ಅನೂಪ್, ತನಗೆ ಮೋಸ ಮಾಡಿದವಳ ಮುಖ ವಿಕಾರವಾಗಬೇಕು ಇಲ್ಲಾ ಆಕೆ ಸಾಯಬೇಕು ಎಂದು ನಿರ್ಧರಿಸಿದ್ದ.
ಪಾರ್ಸಲ್ ಬಿಚ್ಚಿ ನೋಡಿ ಅದು ಮಿಕ್ಸಿ ಎಂದು ಗೊತ್ತಾಗಿ ಬೇಡ ಎಂದು ಹಿಂದಿರುಗಿಸಲು ನಿರ್ಧರಿಸಿ ಡಿಸೆಂಬರ್ 26ರಂದು ಮಿಕ್ಸಿ ವಾಪಸ್ ಕಳಿಸುವಂತೆ ಕೊರಿಯರ್ ಅಂಗಡಿಗೆ ಕೊಟ್ಟಿದ್ದಳು.
ಕೊರಿಯರ್ ಮಾಡಿದವರ ಪೂರ್ಣ ವಿಳಾಸ ಇಲ್ಲದ ಕಾರಣ ಅದನ್ನು ಬಿಚ್ಚಿ ಪರಿಶೀಲಿಸಲು ಶಾಪ್ ಮಾಲೀಕ ಶಶಿ ಮುಂದಾಗಿದ್ದನು.
ಈ ವೇಳೆ ಮಿಕ್ಸಿ ಸ್ಫೋಟಗೊಂಡು ಶಶಿ ಗಾಯಗೊಂಡಿದ್ದನು.ಎಫ್ಎಸ್ಎಲ್ ತಂಡ, ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತ್ತು.
ಹಾಸನ ಎಸ್ಪಿ ಹರಿರಾಂ ಶಂಕರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣದ ಅಸಲಿತನ ಬಯಲು ಮಾಡಿದ್ದಾರೆ. ಕೊರಿಯರ್ ಮಾಡಿ ಕೊಲೆಗೆ ಯತ್ನಿಸಿದ್ದ ಪ್ರೇಮಿ ಮತ್ತು ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.