ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಗಾಯಕ ಕೆಕೆ ಸಾವು, ಪೊಲೀಸರಿಂದ ತನಿಖೆ
Singer KK's Death Updates: Kolkata Police Registers Unnatural Death Case

ಕೆಕೆ ಎಂದು ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ (53) ಹಠಾತ್ ನಿಧನ ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು, ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ದಕ್ಷಿಣ ಕೋಲ್ಕತ್ತಾದ ನಝರುಲ್ಲಾ ಮಂಚ ಆಡಿಟೋರಿಯಂನಲ್ಲಿ ನಿನ್ನೆ ಕೆಕೆ ಅವರ ಸಂಗೀತ ಸಂಜೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಳಲಿದಂತೆ ಕಾಣುತ್ತಿದ್ದ ಅವರನ್ನು ಆಡಿಟೋರಿಯಂನಿಂದ ಹೊರ ಕರೆತಂದು, ಅವರು ತಂದಿದ್ದ ಹೋಟೆಲ್ನತ್ತ ಕರೆದುಕೊಂಡು ಹೋಗುವ ದಾರಿ ಮಧ್ಯೆ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಸಮೀಪದ ಸಿಎಂಆರ್ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ರಾತ್ರಿ 10 ಗಂಟೆ ವೇಳೆಗೆ ಘೋಷಿಸಿದ್ದಾರೆ. ಆಡಿಟೋರಿಯಂನ ಕುರ್ಚಿಗಳ ಸಾಮಾಥ್ರ್ಯ ಎರಡುವರೆ ಸಾವಿರದಷ್ಟಿತ್ತು. ಆದರೆ ಅಲ್ಲಿ ಸುಮಾರು ಐದು ಸಾವಿರ ಮಂದಿ ಜಮಾವಣೆಗೊಂಡಿದ್ದರು. ಕಾರ್ಯಕ್ರಮ ಆಯೋಜಕರು ಸಭಾಂಗಣದ ಹವಾನಿಯಂತ್ರಣ ವ್ಯವಸ್ಥೆಯನ್ನೂ ಬಂದ್ ಮಾಡಿದ್ದರು. ಇದರಿಂದ ತಾಪಮಾನ ಹೆಚ್ಚಾಗಿತ್ತು, ಬಿಸಿಯುಸಿರಿನಿಂದ ಕೆಕೆ ಬಳಲಿರಬಹುದು ಎಂದು ಹೇಳಲಾಗಿದೆ.
ಕಾರ್ಯಕ್ರಮ ಮುಗಿಯುವ ವೇಳೆಗೆ ಧಣಿದಂತೆ ಕಂಡು ಬಂದ ಅವರನ್ನು ಬೌನ್ಸರ್ಸ್ ಮತ್ತು ಬಾಡಿಗಾರ್ಡ್ಗಳು ಸಭಾಂಗಣದಿಂದ ಹೊರಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ವಿಪರೀತ ಜನಸಂದಣಿಯ ನಡುವೆ ದಾರಿ ಮಾಡಿಕೊಳ್ಳಲು ಬೆಂಕಿ ನಂದಿಸಲು ಬಳಸುವ ಅಗ್ನಿಶಾಮಕ ಸಿಲಿಂಡರ್ಗಳ ಸ್ಪ್ರೇಯನ್ನು ಸಿಂಪಡಿಸಿದ್ದಾರೆ. ಹೇಗೋ ಕಷ್ಟ ಪಟ್ಟು ಗಾಯಕನನ್ನು ಹೊರಗೆ ಕರೆದುಕೊಂಡು ಹೋಗಲಾಗಿದೆ, ಆದರೂ ಅವರು ಹಾದಿ ಮಧ್ಯೆಯೇ ಪ್ರಾಣ ಕಳೆದುಕೊಂಡಿದ್ದಾರೆ.
ಸಾವಿಗೆ ಹೃದಯಾಘಾತ ಕಾರಣವಾಗಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಆದರೆ ಗಾಯಕನ ಮುಖ ಮತ್ತು ತಲೆಯಲ್ಲಿ ಗಾಯಗಳಾಗಿರುವುದನ್ನು ಪ್ರತ್ಯೇಕ್ಷದರ್ಶಿಗಳು ಗುರುತಿಸಿದ್ದಾರೆ. ಹೀಗಾಗಿ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ನಿಜವಾದ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಭಾಂಗಣದಿಂದ ಗಾಯಕ ಹೊರ ಹೋಗುವಾಗ ಕಾಣಸಿಗುವ ವಿಡಿಯೋದಲ್ಲಿ ಬಳಲಿದಂತೆ ಕಂಡು ಬರುತ್ತಿದೆ. ಮತ್ತೊಂದು ವೀಡಿಯೊದಲ್ಲಿ ವಿಪರೀತ ಬೆವರಿದ್ದ ಕೆಕೆ ತನ್ನ ಮುಖವನ್ನು ಒರೆಸಿಕೊಳ್ಳಲು ವಿರಾಮ ತೆಗೆದುಕೊಂಡಿದ್ದು ಕಂಡು ಬಂದಿದೆ. ವೀಡಿಯೊದಲ್ಲಿನ ಇತರ ಧ್ವನಿಗಳು, ಬೋಹೋಟ್ ಝ್ಯಾದಾ ಗರಂ ಹೈ (ಇದು ತುಂಬಾ ಬಿಸಿಯಾಗಿದೆ) ಎಂದು ಹೇಳುವುದನ್ನು ಕೇಳಿಸುತ್ತಿದೆ. ಒಂದು ಹಂತದಲ್ಲಿ ಕೆಕೆ ವೇದಿಕೆಯಲ್ಲಿ ಒಬ್ಬ ವ್ಯಕ್ತಿಗೆ ಸನ್ನೆ ಮಾಡಿ ಹವಾನಿಯಂತ್ರಣ ವ್ಯವಸ್ಥೆಯನ್ನು ಆರಂಭಿಸುವಂತೆ ಸೂಚನೆ ನೀಡುತ್ತಿರುವುದು ಕಂಡು ಬಂದಿದೆ.
ಕೃಷ್ಣಕುಮಾರ್ ಕುನ್ನತ್, ಪಾಲ್, ಯಾರೋನ್ ನಂತಹ ಬಾಲಿವುಡ್ನ ಕೆಲವು ದೊಡ್ಡ ಹಿಟ್ ಚಿತ್ರಗಳ ಮೂಲಕ ಹೆಸರುವಾಸಿಯಾಗಿದ್ದರು. 1990 ರ ದಶಕದ ಉತ್ತರಾರ್ಧದಲ್ಲಿ ಅವರ ಹಾಡುಗಳು ಹದಿಹರೆಯದವರಲ್ಲಿ ಫೆವರಿಟ್ ಆಗಿದ್ದವು. ಶಾಲಾಕಾಲೇಜಗಳ ವಿದಾಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರ ಹಾಡುಗಳು ಸಾಮಾನ್ಯವಾಗಿದ್ದವು.
ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ನೂರಾರು ಹಾಡುಗಳನ್ನು ಕೆಕೆ ಹಾಡಿದ್ದರು. ಗಾಯಕನ ನಿಧನಕ್ಕೆ ಬಾಲಿವುಡ್ ಮತ್ತು ಸಂಗೀತ ಕ್ಷೇತ್ರ ದಿಗ್ಭ್ರಮೆ ವ್ಯಕ್ತ ಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಕ ಸಂದೇಶದಲ್ಲಿ. ಕೆಕೆ ಅವರ ಹಾಡುಗಳು ಎಲ್ಲಾ ವಯೋಮಾನದವರಿಗೂ ಮೆಚ್ಚುಗೆಯಾಗಿದ್ದರು. ತಮ್ಮ ಹಾಡುಗಳ ಮೂಲಕ ಅವರು ನಮ್ಮೊಂದಿಗೆ ಸದಾ ಸ್ಮರಣೀಯರಾಗಿರುತ್ತಾರೆ ಎಂದಿದ್ದಾರೆ.
ಕಳೆದ ಮೂರು ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳ ಪ್ರಮುಖ ಮೂವರ ಗಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಪಂಜಾಬ್ನಲ್ಲಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿದ್ಧು ಮೊಸಾರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಕೇರಳದ ಗಾಯಕ ಎದ್ವಾ ಬಷೀರ್ ತಿರುವನಂತಪುರಂನಲ್ಲಿ ಹಾಡುತ್ತಿದ್ದಂತೆ ಕುಸಿದು ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಕೆಕೆ ನಿಧನ ಸಂಗೀತ ಲೋಕಕ್ಕೆ ಗರ ಬಡಿದಂತಾಗಿದೆ.