
ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಇತರ ನಾಲ್ವರು ಆರೋಪಿಗಳಿಗೆ ದೆಹಲಿಯ ಜಾರಿ ನಿರ್ದೆಶನಾಲಯದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ತಲಾ ₹1 ಲಕ್ಷ ಭದ್ರತಾ ಠೇವಣಿ, ಒಬ್ಬರ ಸಾಕ್ಷಿ, ದೇಶ ಬಿಟ್ಟು ಹೋಗಬಾರದು ಮತ್ತು ಸಾಕ್ಷಿ ನಾಶ ಮಾಡಬಾರದು ಎಂಬ ಷರತ್ತಿನ ಮೇಲೆ ಇ.ಡಿ ನ್ಯಾಯಾಧೀಶ ವಿಕಾಸ ಧುಲ್ ಜಾಮೀನು ಮಂಜೂರು ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ವಾದ –ಪ್ರತಿವಾದ ಅಲಿಸಿರುವ ನ್ಯಾಯಪೀಠ ಇಂದಿಗೆ ಆದೇಶ ಕಾಯ್ದಿರಿಸಿತ್ತು.
ಆ.2ರಂದು ಮಧ್ಯಾಹ್ಬ 3ಕ್ಕೆ ಆದೇಶ ಪ್ರಕಟವಾಗಲಿದ್ದು, ಎಲ್ಲಾ ಆರೋಪಿಗಳು ಕೋರ್ಟ್ಗೆ ಹಾಜರಾಗುವಂತೆ ಸೂಚಿಸಿದೆ.
ಶಿವಕುಮಾರ್, ಅವರ ನಿಕಟವರ್ತಿಗಳಾದ ಉದ್ಯಮಿ ಸಚಿನ್ ನಾರಾಯಣ್, ಶರ್ಮಾ ಟ್ರಾನ್ಸ್ಪೋರ್ಟ್ ಮಾಲೀಕ ಸುನೀಲ್ ಕುಮಾರ್ ಶರ್ಮಾ, ದೆಹಲಿಯ ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಎನ್. ವಿರುದ್ಧ ವಿಚಾರಣೆ ಆರಂಭಿಸುವಂತೆ ಕೋರಿ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದರು.