
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗಲೇ ಕೆಲವು ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಸ್ವಯಂ ನಿವೃತ್ತಿ ಪಡೆದು ಖಾದಿ ಧರಿಸಲು ಸಜ್ಜಾಗಿದ್ದಾರೆ.
ಇದರಲ್ಲಿ ಮುಖ್ಯಮಂತ್ರಿಗಳ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತರಾಗಿದ್ದ ಅನಿಲ್ಕುಮಾರ್ ಸೇರಿದಂತೆ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಮುಂಬರುವ ಚುನಾವಣೆಗೆ ಸ್ರ್ಪಧಿಸಲು ಸಿದ್ದತೆ ನಡೆಸಿದ್ದಾರೆ.
ಆಡಳಿತಾರೂಢ ಬಿಜೆಪಿಯಿಂದ ಸ್ರ್ಪಧಿಸಲು ಹೆಚ್ಚಿನ ಅಧಿಕಾರಿಗಳು ತುದಿಗಾಗಲಲ್ಲಿ ನಿಂತಿದ್ದಾರೆ. ವಿಧಾನಸಭೆ ಇಲ್ಲವೇ ಲೋಕಸಭೆ ಚುನಾವಣಗೆ ಸ್ರ್ಪಧಿಸಲು ಸುರಕ್ಷಿತ ಕ್ಷೇತ್ರಗಳನ್ನು ಹುಡುಕುವ ಶೋಧದಲ್ಲಿ ನಿರತರಾಗಿದ್ದಾರೆ.
ಮುಖ್ಯಮಂತ್ರಿ ಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸಕ್ರಿಯ ರಾಜಕಾರಣಕ್ಕೆ ಮರಳುವ ಇಂಗಿತವನ್ನು ತಮ್ಮ ಆಪ್ತರ ಬಳಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ಆಯುಕ್ತರಾಗಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸ್ತುತ ಸಿಎಂ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿಯಾಗಿರುವ ಮಂಜುನಾಥ್ ಪ್ರಸಾದ್ ಪ್ರಮುಖ ಇಲಾಖೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಧಿಕಾರಿ.
ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ತುಮಕೂರಿನ ಕೊರಟಗೆರೆ, ಮಧುಗುರಿ, ಬೆಂಗಳೂರಿನ ಮಹಾದೇವಪುರ, ಆನೇಕಲ್ ಸೇರಿದಂತೆ ಮತ್ತಿತರ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ.
ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ನೀಡುವುದು ಖಚಿತವಾದರೆ ಸದ್ಯದಲ್ಲೇ ಅವರು ಸ್ವಯಂ ನಿವೃತ್ತಿ ಪಡೆದು ಸಕ್ರಿಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂದು ಗೊತ್ತಾಗಿದೆ.
ಮಂಜುನಾಥ್ ಪ್ರಸಾದ್ ಅವರಂತೆ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ಕುಮಾರ್ ಕೂಡ ಬಿಜೆಪಿಯಿಂದ ಸ್ರ್ಪಧಿಸುವ ಸಾದ್ಯತೆ ಇದೆ. ಈಗಾಗಲೇ ಒಂದು ಸುತ್ತು ಪಕ್ಷದ ವರಿಷ್ಠರ ಜೊತೆ ಮಾತುಕತೆ ನಡೆಸಿರುವ ಅವರು, ಮಧುಗಿರಿ ಇಲ್ಲವೇ ಕೊರಟಗೆರೆಯಿಂದ ಸ್ರ್ಪಧಿಸುವ ಸಾಧ್ಯತೆ ಇದೆ.
ಈಗಾಗಲೇ ಕೊರಟಗೆರೆ ಕ್ಷೇತ್ರದಲ್ಲಿ ಅನಿಲ್ಕುಮಾರ್ ಕೆಲಸವನ್ನು ಸಹ ಆರಂಭಿಸಿದ್ದು, ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ.
ಇದೇ ರೀತಿ ಅನೇಕ ಅಧಿಕಾರಿಗಳು ಬೇರೆ ಬೇರೆ ಪಕ್ಷಗಳಿಂದ ಸ್ರ್ಪಸುವ ಸಾಧ್ಯತೆಯಿದ್ದು, ಟಿಕೆಟ್ ನೀಡುವ ಭರವಸೆ ಸಿಕ್ಕ ನಂತರ ನಿವೃತ್ತಿಗೆ ಅರ್ಜಿ ಹಾಕಿ ರಾಜಕೀಯ ಕ್ಷೇತ್ರಕ್ಕೆ ಧುಮುಕಲಿದ್ದಾರೆ.