
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ, ಚಿತ್ರ ನಿರ್ಮಾಪಕ – ಚಿತ್ರಕಥೆಗಾರ ಸಲೀಂ ಖಾನ್ ಅವರಿಗೆ ನೆನ್ನೆ ಬೆದರಿಕೆ ಪತ್ರ ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿರುವ ಪ್ರಕಾರ, ಸಲ್ಮಾನ್ ಖಾನ್ ಹಾಗೂ ಸಲೀಂ ಖಾನ್ ಅವರಿಗೆ ಬಂದ ಬೆದರಿಕೆ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯ ವಿರುದ್ಧ ಬಾಂದ್ರಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಬೆದಿರಿಕೆ ಪತ್ರದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಐಫಾದಲ್ಲಿ ಸಲ್ಮಾನ್ ಖಾನ್
ಅಸಲಿಗೆ, ಐಫಾ ಈವೆಂಟ್ ಸಲುವಾಗಿ ನಟ ಸಲ್ಮಾನ್ ಖಾನ್ ಅಬು ಧಾಬಿಗೆ ತೆರಳಿದ್ದರು. ಭಾನುವಾರವಷ್ಟೇ ಅಬು ಧಾಬಿಯಿಂದ ಮುಂಬೈಗೆ ಸಲ್ಮಾನ್ ಖಾನ್ ಮರಳಿದರು. ಶನಿವಾರ ಅಬು ಧಾಬಿಯಲ್ಲಿ ಜರುಗಿದ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಿತೇಶ್ ದೇಶ್ಮುಖ್ ಮತ್ತು ಮನೀಶ್ ಪೌಲ್ ಜೊತೆ ಸಲ್ಮಾನ್ ಖಾನ್ ಹೋಸ್ಟ್ ಆಗಿದ್ದರು.
ಬೆದರಿಕೆ ಪತ್ರ ಸಿಕ್ಕಿದ್ದೆಲ್ಲಿ?
‘’ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ವಾಯುವಿಹಾರಕ್ಕೆ ಪ್ರತಿದಿನ ಬೆಳಗ್ಗೆ ತೆರಳುತ್ತಾರೆ. ಈ ಸಮಯದಲ್ಲಿ ಅವರು ಸಾಮಾನ್ಯವಾಗಿ ಪ್ರತಿದಿನ ವಿರಾಮ ತೆಗೆದುಕೊಳ್ಳುವ ಒಂದು ಜಾಗವಿದೆ. ಅದೇ ಜಾಗದ ಬೆಂಚ್ ಮೇಲೆ ಒಂದು ಚೀಟಿ ಇಡಲಾಗಿತ್ತು’’ ಎಂದು ಪೊಲೀಸರು ಮಾಹಿತಿ ನೀಡಿರುವ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಚೀಟಿಯಲ್ಲಿ ಏನಿತ್ತು?
ಸಲೀಂ ಖಾನ್ ಅವರ ಭದ್ರತಾ ಸಿಬ್ಬಂದಿಗೆ ಆ ಚೀಟಿ ಸಿಕ್ಕಿತ್ತು. ಅದನ್ನು ಸಲೀಂ ಖಾನ್ ಅವರಿಗೆ ನೀಡಿದರು. ಚೀಟಿಯಲ್ಲಿ ‘’ಮೂಸಾವಾಲಾ ರೀತಿಯಲ್ಲೇ ನಿಮಗೂ ಮಾಡುತ್ತೇವೆ’’ ಎಂದು ಚೀಟಿಯಲ್ಲಿ ಬರೆಯಲಾಗಿತ್ತು ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಅಂದ್ಹಾಗೆ, ಸಿಧು ಮೂಸಾವಾಲಾ ಅವರನ್ನು ಕಳೆದ ತಿಂಗಳು ಗುಂಡಿಕ್ಕಿ ಹತ್ಯ ಮಾಡಲಾಗಿತ್ತು.
ಸಿಧು ಮೂಸಾವಾಲಾ ಹತ್ಯೆ
ಪಂಜಾಬಿ ಗಾಯಕ ಸಿಧು ಮೂಸಾವಾಲಾ ಅವರಿಗೆ ನೀಡಲಾದ ಭದ್ರತೆಯನ್ನು ಪಂಜಾಬ್ ಸರ್ಕಾರ ಕಡಿತಗೊಳಿಸಿದ ಒಂದು ದಿನದ ನಂತರ ಜವಾಹರ್ ಕೆ ಗ್ರಾಮದಲ್ಲಿ ಕಳೆದ ಭಾನುವಾರ ದಾಳಿಕೋರರ ಗುಂಪಿನಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟರು. ಸಿಧು ಮೂಸಾವಾಲಾ ಅವರ ದೇಹದಲ್ಲಿ 19 ಗುಂಡುಗಳ ಗಾಯಗಳಿದ್ದವು. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಗುಂಡು ಹಾರಿಸಿದ 15 ನಿಮಿಷಗಳಲ್ಲಿ ಸಿಧು ಮೂಸಾವಾಲಾ ಸಾವನ್ನಪ್ಪಿದರು.