
ಮಂಗಳೂರು: ಪರವಾನಗಿ ರಹಿತ ಮರಳು ಸಾಗಾಟದ ಮೂರು ಲಾರಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಎಸ್.ಐ.ಹರೀಶ್ ನೇತೃತ್ವದ ತಂಡ ವಶಕ್ಕೆ ಪಡೆದುಕೊಂಡಿದೆ.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕಡೇಶ್ವಾಲ್ಯ ಗ್ರಾಮದಿಂದ ಸಿ.ಆರ್ ಝಡ್ ವ್ಯಾಪ್ತಿಯಿಂದ ಪರವಾನಗಿ ಪಡೆದು ಮರಳು ತೆಗೆಯುವ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು, ಕಡೆಶ್ವಾಲ್ಯ ಹಾಗೂ ಬರಿಮಾರು ಗ್ರಾಮಗಳಲ್ಲಿ ನದಿಯಿಂದ ಮರಳನ್ನು ಲೋಡ್ ಮಾಡಲು ವ್ಯವಸ್ಥೆ ಮಾಡಿದ್ದರು.
ಎರಡು ಕಡೆಗಳಿಂದ ಮರಳು ಲೋಡ್ ಮಾಡಿದ ಲಾರಿಗಳು ಕಾಗೆಕಾನ ಬಳಿಕ ಸೇರಾ ಮೂಲಕ ಬುಡೋಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕ ಮಾಡುತ್ತಿದ್ದವು.
ಆದರೆ ಕಳೆದ ಕೆಲ ದಿನಗಳಿಂದ ಈ ರಸ್ತೆಯಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಬದಲಿಸಿದ ಮರಳು ಲಾರಿಗಳು ಬರಿಮಾರು ಎಂಬಲ್ಲಿಂದ ಲೋಡ್ ಮಾಡಿ ಅಲ್ಲಿಂದ ಬರಿಮಾರಿನಿಂದ ಸೂರಿಕುಮೇರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕ ಮಾಡುತ್ತಿದ್ದು,
ಇದರಿಂದ ರಸ್ತೆ ಕೆಡುತ್ತದೆ ಎಂದು ಆರೋಪಿಸುತ್ತಿದ್ದ ಇಲ್ಲಿನ ಸ್ಥಳೀಯರು ಲಾರಿಯನ್ನು ತಡೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಎಸ್. ಐ.ಹರೀಶ್ ಅವರು ಸ್ಥಳದಲ್ಲಿದ್ದ ಮರಳು ತುಂಬಿದ ಎರಡು ಲಾರಿಗಳನ್ನು ಹಾಗೂ ಅಲ್ಲೇ ನಿಂತಿದ್ದ ಖಾಲಿ ಲಾರಿ ಸೇರಿದಂತೆ ಒಟ್ಟು ಮೂರು ಲಾರಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಮರಳು ಸಾಗಾಟಕ್ಕೆ ಲಾರಿಗಳಿಗೆ ಅನುಮತಿ ಇಲ್ಲ ಎಂಬುದು ದೃಡಪಟ್ಟಿದೆ.