ರಾಜ್ಯ

ಮೈಸೂರು: ಕುಂಠೇರಿ ಕೆರೆ ವ್ಯಾಪ್ತಿಯ ರೈತರಿಗೆ ಕಂಟಕ, ಏರಿ ಒಡೆದು ರೈತರ ಬೆಳೆ ಕೊಚ್ಚಿ ಹೋಗುವ ಅಪಾಯ

ಹುಣಸೂರಿನಲ್ಲಿ ಕುಂಠೇರಿ ಕೆರೆಯ ಕೋಡಿಯ ನೀರು ಹರಿದು ಹೋಗುವ ಮೋರಿ ಹಾಗೂ ಪೈಪ್‌ಗೆ ಕಾಂಕ್ರಿಟ್‌ ಹಾಕಿ ಮುಚ್ಚಿರುವ ಪರಿಣಾಮ ಕೆರೆ ಏರಿ ಮೇಲೆ ನೀರು ಹರಿಯುವ ಹಾಗೂ ಏರಿ ಒಡೆಯುವ ಆತಂಕ ಉಂಟಾಗಿದೆ.

ತಾಲೂಕಿನ ಹನಗೋಡು ಗ್ರಾಮದ ಕುಂಠೇರಿ ಕೆರೆಯ ಕೋಡಿ ನೀರು ಜಮೀನಿನ ಮೇಲೆ ಹರಿದು ಹೋಗಲಿದೆ ಎಂಬ ಉದ್ದೇಶದಿಂದ ರೈತರೊಬ್ಬರು 15 ದಿನಗಳ ಹಿಂದಷ್ಟೆ ಮೋರಿಯ ಬಾಯಿಯನ್ನೇ ಕಾಂಕ್ರಿಟ್‌ನಿಂದ ಮುಚ್ಚಿ ಹಾಕಿದ್ದಾರೆ. ಸುಮಾರು 50 ಎಕರೆ ಪ್ರದೇಶ ವಿಸ್ತೀರ್ಣದ ಕುಂಠೇರಿ ಕೆರೆಯು 74 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ನೂರಾರು ರೈತರ ಹಾಗೂ ಜಾನುವಾರುಗಳ ಜೀವನಾಡಿಯ ಕೆರೆಯಾಗಿದೆ.

ಈ ಕೆರೆಗೆ ಮೇಲ್ಭಾಗದ ಗೂಳಿಕಟ್ಟೆ, ದೊಡ್ಡಕಟ್ಟೆ, ಅಣ್ಣೆಗೆರೆ ಕೆರೆಗಳ ಕೋಡಿ ನೀರು ಸೇರುತ್ತಿದ್ದು, ಪ್ರತಿ ಮಳೆಗಾಲದಲ್ಲೂ ಮೂರು ಕೆರೆಗಳ ನೀರು ಅಪಾರ ಪ್ರಮಾಣದಲ್ಲಿ ಹರಿದು ಬರುವುದರಿಂದ ಕೋಡಿಯಲ್ಲಿ ಭಾರಿ ನೀರು ಹರಿಯುತ್ತದೆ. ಕೋಡಿ ನೀರು ಹರಿದು ಹೋಗುವ ಪೈಪನ್ನೇ ಮುಚ್ಚಿರುವುದರಿಂದ ಅನಿವಾರ್ಯವಾಗಿ ನೀರು ಏರಿ ಮೇಲೆ ಹರಿದು, ನಂತರ ಏರಿ ಒಡೆದು ರೈತರ ಜಮೀನಿನ ಮೇಲೆ ಹರಿದು ಬೆಳೆಗಳು ಕೊಚ್ಚಿ ಹೋಗುವ ಹಾಗೂ ಕೆರೆಗೂ ಅಪಾಯ ಉಂಟಾಗುವ ಆತಂಕ ಹೆಚ್ಚಿದೆ.

ಏನಿದು ಸಮಸ್ಯೆ?: ಅನಾದಿ ಕಾಲದಿಂದಲೂ ಕೋಡಿಯ ನೀರು ಕೋಡಿಯ ಹತ್ತಿರದಲ್ಲೇ ಏರಿಗೆ ನಿರ್ಮಿಸಿರುವ ಮೋರಿ ಮೂಲಕ ಹಳ್ಳದಲ್ಲಿ ಹರಿದು ಲಕ್ಷ್ಮಣತೀರ್ಥ ನದಿ ಸೇರುತ್ತಿತ್ತು. ಆದರೆ ಜಮೀನು ಮಾಲೀಕರು, ”ಕೋಡಿ ನೀರು ಹರಿದು ಹೋಗುವ ಸ್ಥಳ ನಮ್ಮದು, ಇದು ಸರಕಾರಿ ಜಾಗವಲ್ಲ, ತಮ್ಮ ಜಮೀನಿನ ಮೇಲೆ ಹರಿಯುವುದರಿಂದ ಪ್ರತಿ ವರ್ಷ ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ. ಹೀಗಾಗಿ ತಡೆ ಹಾಕಿದ್ದೇವೆ,” ಎಂದು ಹೇಳುತ್ತಾರೆ.

ಹಾರಂಗಿ ಇಲಾಖೆ ನಿರ್ಲಕ್ಷ್ಯ: ಕಳೆದ ನಾಲ್ಕು ವರ್ಷಗಳಿಂದಲೂ ಕೋಡಿ ನೀರು ಹರಿದು ಹೋಗಲು ಅಡೆ-ತಡೆ ಇದೆ ಎಂಬುದು ಹಾರಂಗಿ ಎಂಜಿನಿಯರುಗಳಿಗೆ ಅರಿವಿದೆ ಹಾಗೂ ಮತ್ತೊಬ್ಬ ರೈತರು ಹುಣಸೂರು ರಸ್ತೆಗೆ ಸೇರುವ ಕೆರೆ ಏರಿಯ ಕೊನೆಯಲ್ಲಿ ಏರಿಯೇ ತಮಗೆ ಸೇರಬೇಕೆಂದು ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದು ಓಡಾಟಕ್ಕೆ ತಡೆಯೊಡ್ಡಿದ್ದರು. ಇವೆಲ್ಲ ಗೊತ್ತಿದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕ್ರಮವಹಿಸದ ಪರಿಣಾಮ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ಕೆರೆಯ ಕೆಳ ಪಾತ್ರದಲ್ಲಿ ತಮ್ಮ ತೋಟ ಸೇರಿದಂತೆ ಹತ್ತಾರು ರೈತರ ಜಮೀನಿದೆ. ಕೋಡಿ ನೀರು ಹರಿದು ಹೋಗಲು ಸ್ಥಳಾವಕಾಶವಿಲ್ಲದೆ ಏರಿಗೆ ಅಪಾಯದ ಸ್ಥಿತಿ ಎದುರಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಕೆರೆ ಕೋಡಿಯ ಸಮಸ್ಯೆ ಬಗ್ಗೆ ಅರಿವಿದೆ. ಕೆರೆಯ ಕೋಡಿ ಹತ್ತಿರದಲ್ಲೇ ರಸ್ತೆ ಇರುವುದರಿಂದ ನೀರು ಹರಿಸಲು ತೊಂದರೆಯಾಗಿದೆ. ಇದೀಗ ಮತ್ತೊಂದು ಬದಿಯಲ್ಲಿ ಕೋಡಿ ನಿರ್ಮಿಸುವ ಆಲೋಚನೆ ಇದೆ. ತಕ್ಷಣಕ್ಕೆ ಪೈಪ್‌ ಅಳವಡಿಸಿ ಕೊಳವಿಗೆ ರಸ್ತೆ ಬದಿಯಿಂದ ಕೋಡಿ ನೀರನ್ನು ಲಕ್ಷ್ಮಣತೀರ್ಥ ನದಿಗೆ ಬಿಡಲು ಕ್ರಮವಹಿಸಲಾಗುವುದು. ಶಾಶ್ವತ ಕಾಮಗಾರಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹಾರಂಗಿ ಕಾರ್ಯಪಾಲಕ ಅಭಿಯಂತರ ಸುರೇಶ್‌ ತಿಳಿಸಿದ್ರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button