
ಚಿಕ್ಕೋಡಿ: ಮನೆಯಲ್ಲಿ ಜಾರಿಬಿದ್ದು ಗಂಭೀರವಾಗಿ ಗಾಯಗೊಂಡ ಯುವಕನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ, ಕುಟುಂಬಸ್ಥರು ಯುವಕನ ಅಂಗಾಂಗ ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಸೆಪ್ಟೆಂಬರ್ 27, ಮಂಗಳವಾರದಂದು ಪ್ರಶಾಂತ ವಿಠ್ಠಲ ಮಲ್ಲೆವಾಡಿ(ಪೂಜಾರಿ) ಎನ್ನುವ 30 ವರ್ಷದ ಯುವಕ ಮನೆಯಲ್ಲಿ ಶೌಚಾಲಯಕ್ಕೆ ಹೋಗಿ ಮರಳಿ ಬರುವಾಗ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಪೋಷಕರು ಅಥಣಿಯ ಅನ್ನಪೂರ್ಣ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಕೋಮಾಗೆ ತಲುಪಿದ್ದ ಆತನಿಗೆ ಚಿಕಿತ್ಸೆ ಫಲಕಾರಿ ಆಗಲೇ ಇಲ್ಲ. ಅಲ್ಲದೆ ಆತನ ಮಿದುಳು ಕೂಡ ನಿಷ್ಕ್ರಿಯಗೊಂಡಿದನ್ನು ವೈದ್ಯರು ದೃಢಪಡಿಸಿದ್ದರು.
ಮಗನ ಮೆದುಳು ನಿಷ್ಕ್ರಿಯಗೊಂಡ ವಿಷಯ ತಿಳಿದ ಯುವಕನ ಪೋಷಕರು ಮಗ ಜೀವಂತವಾಗಿ ಉಳಿಯೋದಿಲ್ಲ ಎಂದು ಮನಗಂಡು ಡಾ. ಅವಿನಾಶ ನಾಯಿಕ, ರಜನ ಸೋಮಯ್ಯ ಅವರ ಸಲಹೆ ಮೇರೆಗೆ ತಮ್ಮ ಮಗನ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು.
ಈ ಮೂಲಕ ನಾಲ್ಕೈದು ಜನರ ಜೀವಕ್ಕೆ ಬೆಳಕು ನೀಡುವ ಮೂಲಕ, ಮಗನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದರು.
ಇನ್ನು ಮೃತ ಪ್ರಶಾಂತನ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುತ್ತಿದ್ದಂತೆಯೇ ಬೆಳಗಾವಿ ಕೆ.ಎಲ್.ಇ ಆಸ್ಪತ್ರೆಯ ವೈದ್ಯರಾದ ಡಾ ಸಂತೋಷ ಪಾಟೀಲ ಪರಿಶೀಲಿಸಿ, ಪ್ರಶಾಂತನ ದೇಹದಿಂದ ಲೀವರ್, 2 ಕಿಡ್ನಿ, ಹೃದಯ, ಚರ್ಮ, ಕಣ್ಣುಗಳನ್ನು ತೆಗೆದು ಬೇರೆಯವರಿಗೆ ಹಾಕಬಹುದು ಎಂದು ತಿಳಿಸಿದರು.
ಪ್ರಶಾಂತ ವಿಠ್ಠಲ ಮಲ್ಲೆವಾಡಿ(ಪೂಜಾರಿ) ತನ್ನ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸುತ್ತಿದ್ದರೂ ಕೂಡ ಈ ಯುವಕನ ಪೋಷಕರು ಮಗನ ಸಾವಿನ ನೋವಿನಂಚಿನಲ್ಲೂ ಕೈಗೊಂಡ ಮಗನ ಅಂಗಾಂಗ ದಾನದ ನಿರ್ಧಾರ, ನಾಲ್ಕೈದು ಜನರ ಬಾಳಿಗೆ ಬೆಳಕು ನೀಡಿದ್ದು ನಿಜಕ್ಕೂ ಶ್ಲಾಘನೀಯ ಹಾಗೂ ಇತರರಿಗೆ ಮಾದರಿ ಆಗಿದೆ.