
ಕೋಲಾರ: ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆಯಾದ ಪರಿಣಾಮ ಮೂರು ಜನರಿಗೆ ಗಾಯಗಳಾಗಿರುವ ಘಟನೆ ಶುಕ್ರವಾರ ಮುಳಬಾಗಿಲಿನಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ನೂಗಲಬಂಡೆ ಬಡಾವಣೆಯಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಘಟನೆಯ ಸಂಬಂಧ ಮೂವರನ್ನು ಮುಳಬಾಗಲು ನಗರ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಗಣೇಶ ಮೂರ್ತಿ ಮೆರವಣಿಗೆ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಅನ್ಯ ಕೋಮಿನ ಯುವಕರನ್ನು ಪ್ರಶ್ನೆ ಮಾಡುತ್ತಿದ್ದ ವೇಳೆ ಅಲ್ಲೆ ಪಕ್ಕದಲ್ಲಿದ್ದ ಮತ್ತೊರ್ವ ಜಾಗ ಬಿಡಲಿಲ್ಲ ಎನ್ನುವ ವಿಚಾರದಲ್ಲಿ ಗಲಾಟೆ ನಡೆದಿದೆ.
ಈ ವೇಳೆ ಮುಸ್ಲಿಂ ಯುವಕರು ಹಾಗೂ ಹಿಂದೂ ಯುವಕರ ಮಧ್ಯೆ ಗಲಾಟೆಯಾಗಿದ್ದು, ಮೂವರು ಯುವಕರಿಗೆ ಗಾಯಗಳಾಗಿವೆ. ಮುಳಬಾಗಲು ಸರಕಾರಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಸುರೇಂದ್ರ, ಮನೋಜ್ ಹಾಗೂ ವೇಣುಗೋಪಾಲ್ ಗಾಯಗೊಂಡವರು.
ಘಟನೆ ಸಂಬಂಧ ಮೂವರು ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.