ಮತಾಂತರ ನಿಷೇಧ ಕಾಯ್ದೆಯಡಿ ಮೊದಲ ಆರೋಪಿ ಸೆರೆ

ಮತಾಂತರ ನಿಷೇಧ ಕಾಯ್ದೆ ಜಾರಿಯಾದ ನಂತರ ಮೊದಲ ಪ್ರಕರಣ ನಗರದಲ್ಲಿ ದಾಖಲಾಗಿದ್ದು, ಮದುವೆಯ ಭರವಸೆ ನೀಡಿ ೧೮ ವರ್ಷದ ಉತ್ತರ ಪ್ರದೇಶ ಮೂಲದ ಯುವತಿಯನ್ನು ಮತಾಂತರ ಮಾಡಿರುವ ಸೈಯದ್ ಮುಯೀನ್ ವಿರುದ್ಧ ಯಶವಂತಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಸೈಯದ್ ಮೊಯಿನ್ (೨೪) ಮತಾಂತರ ನಿಷೇಧ ಕಾಯ್ದೆಯಲ್ಲಿ ಬಂಧಿತನಾದ ಮೊದಲ ಆರೋಪಿಯಾಗಿದ್ದಾನೆ.ಮತಾಂತರಗೊಳಿಸಿರುವ ಯುವತಿಯ ಕುಟುಂಬದವರು ಮೂಲತಃ ಉತ್ತರ ಪ್ರದೇಶದ ಗೋರಖ್ಪುರ ಮೂಲದವರು. ಯುವತಿಯ ತಂದೆ ಪೇಂಟಿಂಗ್ ಕೆಲಸ ಮಾಡುತ್ತಿದ್ದರೆ, ತಾಯಿ ಗೃಹಿಣಿ.
ಇಬ್ಬರು ಸಹೋದರಿಯರು ಓರ್ವ ಸಹೋದರನ ಜೊತೆ ಯುವತಿಯು ಯಶವಂತಪುರದ ಬಿ.ಕೆ.ನಗರದಲ್ಲಿ ೧೫ ವರ್ಷಗಳಿಂದ ವಾಸವಿದ್ದಾರೆ.ಮಗಳು ಅನ್ಯ ಧರ್ಮೀಯ ಯುವಕನನ್ನು ಪ್ರೀತಿಸುತ್ತಿರಬಹುದು ಎಂಬ ಶಂಕೆಯ ನಂತರ ಆರು ತಿಂಗಳ ಹಿಂದೆ ಮಗಳಿಗೆ ಪೋಷಕರು ಬುದ್ಧಿವಾದ ಹೇಳಿದ್ದರು.
ಕಳೆದ ಅ ೫.ರಂದುಅಂಗಡಿಗೆ ಹೋಗಿಬರುವುದಾಗಿ ಹೋಗಿದ್ದ ಯುವತಿ ಮನೆಗೆ ಹಿಂದಿರುಗಿರಲಿಲ್ಲ. ಈ ಸಂಬಂಧ ಕುಟುಂಬದ ಸದಸ್ಯರು ಯಶವಂತಪುರ ಠಾಣೆಯಲ್ಲಿ ಯುವತಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು.
ವಾರದ ಬಳಿಕ ಬುರ್ಖಾ ಧರಿಸಿ ಯುವತಿಯು ಠಾಣೆಗೆ ಬಂದಿದ್ದಳು.ಯುವತಿ ಮತಾಂತರಗೊಂಡಿದ್ದು, ಆಕೆಯನ್ನು ಮದುವೆಯಾಗುವುದಾಗಿ ಮುಯೀನ್ ಎಂಬಾತ ಠಾಣೆಗೆ ಕರೆತಂದಿದ್ದ. ಮಗಳ ನಡೆ ಕಂಡು ಗಾಬರಿಗೊಂಡ ಪೋಷಕರಿಂದ ಯಶವಂತಪುರ ಠಾಣೆಯಲ್ಲಿ ಮೊಯೀನ್ ವಿರುದ್ಧ ಮದುವೆಯ ಭರವಸೆ ಕೊಟ್ಟು ಮತಾಂತರ ಮಾಡಿರುವ ಆರೋಪ ಹೊರಿಸಿ ಮತ್ತೊಂದು ದೂರು ದಾಖಲಿಸಿದರು.
ಯುವತಿಯ ಮನೆಯ ಪಕ್ಕದ ಪ್ರದೇಶದಲ್ಲಿ ವಾಸಿಸುತ್ತಿರುವ ಮುಯೀನ್ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಬೇಕಾದರೆ ಮತಾಂತರವಾಗಬೇಕು ಎಂದು ಮೊಯಿನ್ ಯುವತಿಯ ಮೇಲೆ ಒತ್ತಡ ಒತ್ತಡ ಹೇರಿದ್ದ ಎಂದು ದೂರಲಾಗಿದೆ.
ಮುಯೀನ್ ಮಾತು ನಂಬಿ ಆತನ ಜೊತೆ ಹೋಗಿದ್ದ ಯುವತಿಯನ್ನು ಕಾನೂನು ಬಾಹಿರವಾಗಿ ಮಸೀದಿಯೊಂದರಲ್ಲಿ ಮತಾಂತರ ಮಾಡಲಾಗಿದೆ ಎಂದು ಯುವತಿಯ ಪೋಷಕರು ಹೇಳಿದ್ದು,ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಮತಾಂತರ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.ಮತಾಂತರ ನಿಷೇಧ ಕಾಯ್ದೆಯ ಅನ್ವಯ ಮತಾಂತರ ಪ್ರಕ್ರಿಯೆಗೆ ಹಲವು ನಿಯಮಗಳನ್ನು ವಿಧಿಸಲಾಗಿದೆ.
ಮತಾಂತರವಾಗುವ ವ್ಯಕ್ತಿ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಬಳಿಕ ಡಿಸಿ ಆ ವ್ಯಕ್ತಿಯ ಪೋಷಕರು / ಆಪ್ತರ ಹೇಳಿಕೆ ಪಡೆದು ೩೦ ದಿನಗಳ ಗಡುವು ನೀಡುತ್ತಾರೆ. ಯಾವುದೇ ಒತ್ತಡವಿಲ್ಲದೆ ತಮ್ಮ ಇಷ್ಟದಂತೆ ಮತಾಂತರವಾಗುತಿದ್ದರೆ ಡಿಸಿ ಅನುಮತಿ ನೀಡುತ್ತಾರೆ.
ಯಾವುದೇ ಒತ್ತಡ ಅಥವಾ ಆಮಿಷಕ್ಕೆ ಬಲಿಯಾಗಿ ಮತಾಂತರವಾದರೆ ಮತಾಂತರಕ್ಕೆ ಸಹಾಯ ಮಾಡುವ ಎಲ್ಲಾ ವ್ಯಕ್ತಿಗಳ ಮೇಲೆ ಕೂಡ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಸದ್ಯ ಇದೇ ಕಾಯ್ದೆಯಂತೆ ಮುಯೀನ್ ಹಾಗೂ ಆತನಿಗೆ ಸಹಾಯ ಮಾಡಿದವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.