
ಬೆಂಗಳೂರು: ನೋಟ್ ಬ್ಯಾನ್ ಎಂಬ ರಾಷ್ಟ್ರೀಯ ದುರಂತ ಸಂಭವಿಸಿ ಇಂದಿಗೆ 6 ವರ್ಷ. ಸಂಭ್ರಮಾಚರಣೆ ನಡೆಸುವುದಿಲ್ಲವೇ ಬಿಜೆಪಿ? ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ನೂರಾರು ಜನರ ಜೀವ ಬಲಿ, ಅರ್ಥ ವ್ಯವಸ್ಥೆ ಬುಡಮೇಲು, ಸಿಗದ ಕಪ್ಪು ಹಣ, ನಿಲ್ಲದ ಭ್ರಷ್ಟಾಚಾರ, ಉದ್ದಿಮೆಗಳಿಗೆ ಬೀಗ ಮತ್ತು ಆಗದ ಕ್ಯಾಶ್ಲೆಸ್ ಎಕಾನಮಿ.
ದೇಶ ಅಪ್ರಬುದ್ಧರ ಕೈಗೆ ಸಿಕ್ಕು ನಲುಗುತ್ತಿರುವುದಕ್ಕೆ ಸಾಕ್ಷಿ ಇದು’ ಎಂದು ಟೀಕಿಸಿದೆ.‘ನೋಟ್ ಬ್ಯಾನ್ ಕಪ್ಪು ಹಣವನ್ನು ಮಟ್ಟ ಹಾಕಲು ಕೈಗೊಂಡ ದಿಟ್ಟ ನಿರ್ಧಾರ ಎಂದಿತ್ತು ಬಿಜೆಪಿ.
ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಠೇವಣಿ ಏರಿಕೆಯಾಗಿದೆ, ಕಳೆದ 13 ವರ್ಷದಲ್ಲೇ ಹೆಚ್ಚು ಹಣ ಸ್ವಿಸ್ ಬ್ಯಾಂಕಿಗೆ ಹೋಗಿದೆ ಎಂಬ ವರದಿಗೆ ಬಿಜೆಪಿ ಬಾಯಿ ಬಿಡದಿರುವುದೇಕೆ? ಭಾರತೀಯರ ಬದುಕು ಕಸಿದ ನೋಟ್ ಬ್ಯಾನ್ನಿಂದಾದ ಲಾಭವೇನು?’ ಎಂದು ಬಿಜೆಪಿಗೆ ಕಾಂಗ್ರೆಸ್ ಪ್ರಶ್ನಿಸಿದೆ.
ನೋಟ್ ಬ್ಯಾನ್ ಮೂಲಕ ‘ಕ್ಯಾಶ್ ಲೆಸ್ ಎಕಾನಮಿ’ ಮಾಡಿಬಿಡುತ್ತೇವೆ ಎಂದಿದ್ದ ಬಿಜೆಪಿ ಈಗ ಜನರಲ್ಲಿ ನಗದು ಬಳಕೆ ಹೆಚ್ಚಳವಾಗಿದ್ದಕ್ಕೆ ಮಾತಾಡುತ್ತಿಲ್ಲವೇಕೆ? ನೋಟ್ ಬ್ಯಾನ್ ಮೊದಲಿಗಿಂತ ಈಗ ಶೇ.71ರಷ್ಟು ನಗದು ಬಳಕೆ ಹೆಚ್ಚಿರುವುದೇಕೆ?
ನೋಟ್ ಬ್ಯಾನ್ ಉದ್ದೇಶದ ಬಗ್ಗೆ, ವೈಫಲ್ಯ ಬಗ್ಗೆ ಬಿಜೆಪಿ ಮಾತಾಡಲು ಹಿಂಜರಿಯುತ್ತಿರುವುದೇಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಖೋಟಾ ನೋಟಿನ ಹಾವಳಿ ನಿಯಂತ್ರಿಸಲು ನೋಟ್ ಬ್ಯಾನ್ ಎಂದಿತ್ತು ಬಿಜೆಪಿ ಬಡವರ ಬದುಕು ಕಸಿದ ನೋಟ್ ಬ್ಯಾನ್ನಿಂದ ಖೋಟಾ ನೋಟಿನ ಹಾವಳಿ ನಿಯಂತ್ರಿಸಿಬಿಟ್ಟೆವು ಎಂದು ಎದೆ ತಟ್ಟಿ ಹೇಳಿಕೊಳ್ಳಲಿದೆಯೇ ಬಿಜೆಪಿ?
2021-22ರಲ್ಲಿ 2.30 ಲಕ್ಷ, 2020-21ರಲ್ಲಿ 2.08 ಲಕ್ಷ ಮತ್ತು 2019 -20ರಲ್ಲಿ 2.96 ಲಕ್ಷ ನಕಲಿ ನೋಟು ಪತ್ತೆಯಾಗಿದ್ದೇಕೆ?’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಭ್ರಷ್ಟರನ್ನು ಬೀದಿಯಲ್ಲಿ ನಿಲ್ಲಿಸಲೆಂದೇ ನೋಟ್ ಬ್ಯಾನ್ ಎಂದಿತ್ತು ಬಿಜೆಪಿ. ಆದರೆ ಬೀದಿಯಲ್ಲಿ ನಿಂತು ಸತ್ತಿದ್ದು ಭ್ರಷ್ಟರಲ್ಲ, ಬಡವರು, ಅಸಹಾಯಕರು.
ಇಂತಹ ಅಸಹಾಯಕರು ಅನುಭವಿಸಿದ ಕಷ್ಟಕ್ಕೆ, ನೂರಾರು ಜನರ ಪ್ರಾಣಕ್ಕೆ ಸಿಕ್ಕ ಪ್ರತಿಫಲವಾದರೂ ಏನು ಬಿಜೆಪಿ? ನೋಟ್ ಬ್ಯಾನ್ ಬಗ್ಗೆ ದೇಶದ ಜನರಿಗೆ ಉತ್ತರಿಸಲು ಹಿಂಜರಿಕೆ ಏಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.