ಬೆಂಗಳೂರಿನಿಂದ ನಾಪತ್ತೆಯಾದ ಬಾಲಕಿ ಮಂಗಳೂರಿನಲ್ಲಿ ಸುತ್ತಾಟ

ಮಂಗಳೂರು: ಬೆಂಗಳೂರಿನ (Bengaluru) ಮಹಾಲಕ್ಷ್ಮೀ ಲೇಔಟ್ನ ಮನೆಯಿಂದ ಸೋಮವಾರ ನಾಪತ್ತೆಯಾದ ಬಾಲಕಿಯೊಬ್ಬಳು (Missing Girl) ಮಂಗಳೂರಿಗೆ (Mangaluru) ಆಗಮಿಸಿ, ನಾನಾ ಕಡೆ ತಿರುಗಾಡಿದ ಬಗ್ಗೆ ಮಾಹಿತಿ ಲಭಿಸಿದೆ.
ಭಾರ್ಗವಿ (14) ನಾಪತ್ತೆಯಾದ ಬಾಲಕಿ.ಈಕೆ ಸೋಮವಾರ ಬೆಂಗಳೂರಿನಿಂದ ನಾಪತ್ತೆಯಾಗಿದ್ದು, ಅಲ್ಲಿಂದ ಬಸ್ ಮೂಲಕ ಬೆಳಗಿನ ಜಾವ 3 ಗಂಟೆಗೆ ಮಂಗಳೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾಳೆ. ಅಲ್ಲಿಂದ ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಪಡಿಸಿ ಮುಕ್ಕ ಬೀಚ್ಗೆ ತೆರಳಿದ್ದಾಳೆ. ಮುಕ್ಕ ಬೀಚ್ನಲ್ಲಿ ಸ್ವಲ್ಪ ಹೊತ್ತು ತಿರುಗಾಡಿ ಅದೇ ರಿಕ್ಷಾದಲ್ಲಿ ಕದ್ರಿ ಪಾರ್ಕ್ಗೆ ಬಂದಿದ್ದಾಳೆ.
ಪಾರ್ಕ್ನ ಬಾಲಭವನ ಸಮೀಪದ ಶೌಚಾಲಯಕ್ಕೆ ಹೋಗಿ ಮುಖ ತೊಳೆದು ವಾಪಾಸ್ ಬಂದಿದ್ದಾಳೆ. ಅಲ್ಲಿಂದ ರಿಕ್ಷಾದಲ್ಲಿ ಮತ್ತೆ ಕೆಎಸ್ಆರ್ಟಿಸಿಗೆ ಮರಳಿ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ರಿಕ್ಷಾ ಚಾಲಕನ ಬಳಿ ಹೇಳಿ ಬಾಡಿಗೆ ನೀಡಿ ತೆರಳಿದ್ದಾಳೆ.
ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣ ಮಂಗಳೂರಿಗೆ ಬಂದಿರುವುದಾಗಿ ರಿಕ್ಷಾ ಚಾಲಕನ ಬಳಿ ತಿಳಿಸಿದ್ದಾಳೆ. ಆ ಬಳಿಕ ಬಾಲಕಿ ಯಾವ ಕಡೆ ಹೋಗಿದ್ದಾಳೆಂದು ಮಾಹಿತಿ ಲಭಿಸಿಲ್ಲ.ಈ ಬಾಲಕಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪೊಲೀಸರು ತಿಳಿಸಿದ್ದಾರೆ.