ಬೆಂಗಳೂರಿನಲ್ಲಿ ರಾಜಕಾಲುವೆಗಳ ಒತ್ತುವರಿ ಪ್ರಕರಣ

ಬೆಂಗಳೂರು ನಗರದಲ್ಲಿನ ರಾಜಕಾಲುವೆಗಳ ಒತ್ತುವರಿ ಸಂಬಂಧ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿನ ಉಲ್ಲೇಖದ ಕುರಿತು ಮಾಹಿತಿ ನೀಡುವಂತೆ ಹೈಕೋರ್ಟ್ ಗುರುವಾರ ಬಿಬಿಎಂಪಿಗೆ ನಿರ್ದೇಶನ ನೀಡಿದೆ.
ನಗರದ ರಸ್ತೆ ದುಸ್ಥಿತಿ ಸಂಬಂಧ ವಿಜಯ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ವಿಚಾರಣೆ ವೇಳೆ ನ್ಯಾಯಪೀಠ, ನಗರದಲ್ಲಿ ಬಿದ್ದಿರುವ ರಸ್ತೆ ಗುಂಡಿಗಳಧಿನ್ನು ಇಟ್ಟಿಗೆ ಚೂರು, ನುಚ್ಚುಗಲ್ಲು ಮತ್ತು ಸಿಮೆಂಟ್ ಬ್ಲಾಕ್ ಚೂರುಗಳಿಂದ ಮುಚ್ಚಲಾಗುತ್ತಿದೆ.
ಗುಂಡಿ ಮುಚ್ಚಲು ಯಂತ್ರ ಬಳಸುತ್ತಿರುವ ದೇಶದ ಮೊದಲ ಪಾಲಿಕೆ ಎಂದು ಹೇಳುತ್ತಿರುವ ಬಿಬಿಎಂಪಿ, ಈ ಮಾದರಿಯಲ್ಲಿ ರಸ್ತೆ ಗುಂಡಿ ಮುಚ್ಚುತ್ತಿರುವುದು ದುರದೃಷ್ಟಕರ ಎಂದು ತರಾಟೆಗೆ ತೆಗೆದುಕೊಂಡಿತು.
ಅಲ್ಲದೆ, ಒತ್ತುವರಿ ತೆರವು ಪ್ರಕ್ರಿಯೆ ಸ್ಥಗಿತವಾಗಿದೆಯೇ? ಒತ್ತುವರಿ ಸಂಬಂಧ ಬೇರೆ ಯಾವುದಾದರೂ ಪ್ರಾಧಿಕಾರವು ಪರ್ಯಾಯವಾಗಿ ತನಿಖೆ ನಡೆಸುತ್ತಿದೆಯೇ ಎಂಬುದನ್ನು ಕೋರ್ಟ್ ತಿಳಿಯಬೇಕಿದೆ.
ಗುತ್ತಿಗೆದಾರರು ಸಾರ್ವಜನಿಕ ಸೇವೆ ಮಾಡುತ್ತಿಲ್ಲ. ಹಣ ಮಾಡಲು ಇದ್ದಾರೆ. ಅವರನ್ನು ಬಿಬಿಎಂಪಿ ನಿಯಂತ್ರಿಸಬೇಕು ಎಂದು ಮೌಖಿಕವಾಗಿ ತಿಳಿಸಿ ವಿಚಾರಣೆ ಮುಂದೂಡಿತು.
ನಿತ್ಯ ಒತ್ತುವರಿ ತೆರವುವಿಚಾರಣೆ ವೇಳೆ ಹೈಕೋರ್ಟ್ ನಿರ್ದೇಶದನ್ವಯ ದೂರು ಪರಿಹಾರ ಕೇಂದ್ರಕ್ಕೆ ಈವರೆಗೂ ಆಗಿರುವ ಬೆಳವಣಿಗೆಗಳನ್ನು ವಿವರಿಸಿದ ಬಿಬಿಎಂಪಿ ವಕೀಲರು, ಮಳೆ ನೀರು ಹರಿದು ಹೋಗಲು ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ.
ರಾಜಕಾಲುವೆ ಒತ್ತುವರಿ ಪತ್ತೆ ಮತ್ತು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಜಕಾಲುವೆಯ ಎಷ್ಟು ಒತ್ತುವರಿಯನ್ನು ಪತ್ತೆ ಮಾಡಲಾಗಿದೆ ಹಾಗೂ ಎಷ್ಟು ತೆರವುಗೊಳಿಸಲಾಗಿದೆ?
ಎಂದು ಪ್ರಶ್ನಿಸಿತಲ್ಲದೆ, ಆ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡದಿದ್ದರೆ ಅದರ ಮೇಲೆ ನ್ಯಾಯಾಲಯ ನಿಗಾ ವಹಿಸುವುದು ಹೇಗೆ? ಎಂದು ಕೇಳಿತು.
ಬಿಬಿಎಂಪಿ ಪರ ವಕೀಲರು, ಪ್ರತಿ ನಿತ್ಯ ಒತ್ತುವರಿ ಪತ್ತೆ ಹಾಗೂ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈವರೆಗೂ ಎಷ್ಟು ಒತ್ತುವರಿ ಮಾಡಲಾಗಿದೆ ಎಂಬ ಬಗ್ಗೆ ವರದಿ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು.