ಬಿಬಿಎಂಪಿ ಚುನಾವಣೆ ಮುಂದೂಡಲು ತಂತ್ರಗಾರಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಡಿಸೆಂಬರ್ ೩೧ರೊಳಗೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದ್ದರೂ, ರಾಜ್ಯ ಸರ್ಕಾರ ಚುನಾವಣೆ ವಿಳಂಬಕ್ಕೆ ಕಾರಣಗಳನ್ನು ಹುಡುಕಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ.
ಸರ್ಕಾರ ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ದ್ವಿಸದಸ್ಯ ಪೀಠದ ಮೊರೆ ಹೋಗುವ ಸಾಧ್ಯತೆ ಇದ್ದು, ಇದು ಮತ್ತಷ್ಟು ವಿಳಂಬಕ್ಕೆ ಕಾರಣವಾಗಲಿದೆ.ಅಷ್ಟೇ ಅಲ್ಲದೆ ಸರ್ಕಾರ ಚುನಾವಣೆಯನ್ನು ವಿಳಂಬ ಮಾಡುವುದಕ್ಕೆ ಹಲವು ತಂತ್ರಗಳ ಮೊರೆ ಹೋಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಮಾಜಿ ವಿಪಕ್ಷ ನಾಯಕರು ಹೇಳಿದ್ದಾರೆ.
ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶ ನೀಡಿದ್ದರೂ, ವಿಪಕ್ಷಗಳಿಗೆ ಚುನಾವಣೆ ನಡೆಯುವುದೇ ಎಂಬ ಅನುಮಾನ ಇನ್ನೂ ಕಾಡುತ್ತಿದೆ.ಮತ್ತೊಂದೆಡೆ, ಬಿಜೆಪಿ ಮಾತ್ರ ಚುನಾವಣೆಗೆ ಸಿದ್ಧ ಎಂದು ಹೇಳಿದೆ.ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮಾಜಿ ಸದಸ್ಯರೊಬ್ಬರು, ಕೆಲವು ಬಿಜೆಪಿ ಬೆಂಬಲಿಗರು ಮೀಸಲಾತಿ ಪ್ರಕ್ರಿಯೆಯನ್ನು ಕೋರ್ಟ್ ನಲ್ಲಿ ಪ್ರಶ್ನಿಸಬಹುದು, ಇಲ್ಲವೇ ದ್ವಿಸದಸ್ಯ ಪೀಠದ ಮೊರೆ ಹೋಗಬಹುದು.
ಇನ್ನು ಮುಂದಿನ ವರ್ಷ ವಿಧಾನಸಭಾ ಚುನಾವಣೆಯೂ ಇರುವುದರಿಂದ ಚುನಾವಣೆ ಇನ್ನಷ್ಟು ವಿಳಂಬವಾಗಲಿದೆ ಎಂದು ತಿಳಿಸಿದರು.ಕಳಪೆ ಆಡಳಿತದಿಂದ ಬಿಜೆಪಿ ಚುನಾವಣೆಯಲ್ಲಿ ಸೋಲುವ ಆತಂಕ ಹೊಂದಿದೆ. ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿರುವುದರಿಂದ ಜನ ರೋಸಿಹೋಗಿರುವುದು, ರಸ್ತೆ ಗುಂಡಿಗಳ ಕಾರುಬಾರು, ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಪ್ರದೇಶಗಳು ಬಿಜೆಪಿಯ ಘನತೆಯನ್ನು ಕುಗ್ಗಿಸಿವೆ.
ಆದ್ದರಿಂದ ಸರ್ಕಾರ ಉದ್ದೇಶಪೂರ್ವಕವಾಗಿ ಡೀಲಿಮಿಟೇಷನ್, ಮೀಸಲಾತಿಯನ್ನು ವಿರೋಧಿಸುತ್ತಿದ್ದು, ಇದನ್ನೇ ಚುನಾವಣೆ ಮುಂದೂಡುವುದಕ್ಕೆ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು.ಬಿಬಿಎಂಪಿ ಕೌನ್ಸಿಲ್ ಅವಧಿ ಮುಕ್ತಾಯಗೊಂಡು ಎರಡು ವರ್ಷಗಳೇ ಕಳೆದಿವೆ.
ಸರ್ಕಾರ ಚುನಾವಣೆ ನಡೆಸಲು ಯಾವುದೇ ಕ್ರಮ ಕೈಗೊಂಡಿಲ್ಲ. ೨೦೦೮ ರಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಲೂ ಅವರು ಚುನಾವಣೆಯನ್ನು ೨ ವರ್ಷಗಳ ಕಾಲ ವಿಳಂಬ ಮಾಡಿದ್ದರು, ಹೈಕೋರ್ಟ್ ಆದೇಶ ಸ್ವಲ್ಪ ಸಮಾಧಾನ ತಂದಿದೆ, ಹೈಕೋರ್ಟ್ ನ ಆದೇಶ ಆಶಾಕಿರಣವಾಗಿದೆ ಎಂದು ಜೆಡಿಎಸ್ ನ ನಾಯಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.