ಬಿಬಿಎಂಪಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ : 9 ಕಡೆ ಘರ್ಜಿಸಿದ ಜೆಸಿಬಿ

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬೃಹತ್ ಮಳೆ ನೀರುಗಾಲುವೆಗಳನ್ನು ಒತ್ತುವರಿ ಮಾಡಿರುವ ಮನೆಮಾಲೀಕರ ಕಂಪೌಂಡ್, ಶೆಡ್ ಗಳನ್ನು ತೆರವುಗೊಳಿಸಲಾಗ್ತಿದೆ. ಇಂದು ಒಟ್ಟು 7 ಕಡೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಯಲಹಂಕ ವಲಯ ವಿದ್ಯಾರಣ್ಯಪುರ ವಾರ್ಡ್ ನ ಬಸವಸಮಿತಿ ಲೇಔಟ್ ವ್ಯಾಪ್ತಿಯಲ್ಲಿ ಮಳೆ ನೀರುಗಾಲುವೆಯ ಮೇಲೆ ಬೇರೆ ಬೇರೆ ಸ್ಥಳದಲ್ಲಿ ಸುಮಾರು 195 ಅಡಿ ಉದ್ದದಷ್ಟು ಮನೆಯ ಕಾಂಪೌಂಡ್ ಗೋಡೆ ಹಾಗೂ ಖಾಲಿ ಸೈಟ್ನ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ.
ಬೊಮ್ಮನಹಳ್ಳಿ ವಲಯ ಅಂಜನಾಪುರ ವಾರ್ಡ್ ನ 60 ಅಡಿ ರಸ್ತೆ ಬಳಿ 2 ಗುಂಟೆ ಮಳೆ ನೀರುಗಾಲುವೆಯ ಖಾಲಿ ಜಾಗವನ್ನು ಪಾಲಿಕೆಯ ವಶಕ್ಕೆ ಪಡೆಯಲಾಗಿದೆ.
ವಸಂತಪುರ ವಾರ್ಡ್ ಸತ್ಯಮ್ಮನಕುಂಟೆಯಲ್ಲಿ 35 ಮೀಟರ್ ಉದ್ದದ ಕಾಂಪೌಂಡ್ ಗೋಡೆ ತೆರವುಗೊಳಿಸಲಾಗಿದೆ ಹಾಗೂ 4 ಗುಂಟೆ ಮಳೆ ನೀರುಗಾಲುವೆಯ ಖಾಲಿ ಜಾಗವನ್ನು ಪಾಲಿಕೆಯ ವಶಕ್ಕೆ ಪಡೆಯಲಾಗಿದೆ.
ಮಂಗಮ್ಮನಪಾಳ್ಯದ ರಸ್ತೆ ಬದಿಯ ಮಳೆ ನೀರುಗಾಲುವೆಯ ಮೇಲೆ ಅಳವಡಿಸಲಾಗಿದ್ದ ತಾತ್ಕಾಲಿಕ ಶೇಡ್ ರೂಫ್ ಗಳನ್ನು ತೆರವುಗೊಳಿಸಿ ಮತ್ತೊಮ್ಮೆ ಒತ್ತುವರಿ ಮಾಡದಂತೆ ಮಳಿಗೆಯ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.
ರಾಜರಾಜೇಶ್ವರಿ ನಗರ ವಲಯ ಲಿಂಗಧೀರನಹಳ್ಳಿಯ ನಾಟಕದ ಚೆನ್ನಪ್ಪ ಬಡಾವಣೆಯ ಖಾಲಿ ಜಾಗದ 15 ಅಡಿ ಉದ್ದ ಹಾಗೂ 6 ಅಡಿ ಎತ್ತರದ ಕಾಂಪೌಂಡ್ ಗೋಡೆಯನ್ನು ತೆರವುಗೊಳಸಿಲಾಗಿದೆ.
ದಾಸರಹಳ್ಳಿ ವಲಯ ಹೆಗ್ಗನಹಳ್ಳಿ ವಾರ್ಡ್ ಭೈರವೇಶ್ವರ ಇಂಡಸ್ಟ್ರಿಯಲ್ ಎಸ್ಟೇಟ್ ನವರು ರಾಜಕಾಲುವೆಯ ಮೇಲೆ ಸುಮಾರು 17 ಮೀಟರ್ ಉದ್ದ ಹಾಗೂ 8 ಅಡಿ ಎತ್ತರದ ತಡೆಗೋಡೆಯನ್ನು ನಿರ್ಮಿಸಿದ್ದು, ಸದರಿ ತಡೆಗೋಡೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿರುತ್ತದೆ. ಜೊತೆಗೆ 20 ಚ.ಅ ಜಾಗವನ್ನು ಪಾಲಿಕೆಯ ವಶಕ್ಕೆ ಪಡೆಯಲಾಗಿದೆ.
ಮಹದೇವಪುರ ವಲಯ ವರ್ತೂರು ಕೋಡಿ ಬಳಿಯ 10 ಮೀಟರ್ ಅಗಲದ ಮಳೆ ನೀರುಗಾಲುವೆಯ ಪೈಕಿ 2 ಮೀಟರ್ ಜಾಗದಲ್ಲಿ ಮನೆಯ ಕಾಂಪೌಂಡ್ ಗೋಡೆ ಹಾಗೂ ಉಳಿದ 8 ಮೀಟರ್ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿದ್ದು, ಅದರ ತೆರವು ಕಾರ್ಯಾಚರಣೆ ನಡೆಯುತ್ತಿರುತ್ತದೆ.
ಸದರಿ ಸ್ಥಳದಲ್ಲಿ ಸುಮಾರು 300 ಮೀಟರ್ ಮಳೆ ನೀರುಗಾಲುವೆಯ ಒತ್ತುವರಿಯ ಪೈಕಿ ಇದುವರೆಗೆ 70 ಮೀಟರ್ ರಷ್ಟು ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗಿದೆ.
ಪೂರ್ವ ವಲಯದ ಇಂದಿರಾ ನಗರ 80 ಅಡಿ ರಸ್ತೆ(ಬಿಎಸ್.ಎನ್.ಎಲ್ ಕಛೇರಿ ಹತ್ತಿರ) ಮಳೆನೀರುಗಾಲುವೆ ಮೇಲೆ ಅಳವಡಿಸಿದ್ದ ಸುಮಾರು 5 ಮೀಟರ್ ಉದ್ದದ ಸ್ಲ್ಯಾಬ್ ಗಳನ್ನು ತೆರುವುಗೊಳಿಸಲಾಗಿದೆ.
ಇಂದು ಒತ್ತುವರಿ ತೆರವುಕಾರ್ಯಚರಣೆ ನಡೆಸಿರುವ ಎಲ್ಲಾ ಕಡೆಗಳಲ್ಲಿಯೂ ಮತ್ತೊಮ್ಮೆ ಒತ್ತುವರಿ ಮಾಡದಂತೆ ಹಾಗೂ ಮಳೆ ನೀರುಗಾಲುವೆಯ ಮೇಲೆ ಕಾಂಪೌಂಡ್ ಗೋಡೆ ನಿರ್ಮಿಸದಂತೆ ಎಚ್ಚರಿಕೆ ನೀಡಲಾಗಿದೆ.