ಬಾರ್ಗಳಲ್ಲಿ ಭುವನೇಶ್ವರಿ ಭಾವಚಿತ್ರ ದೂರು ನೀಡಲು ನಿರ್ಧಾರ

ಬಾರ್ ಮತ್ತು ವೈನ್ ಸ್ಟೋರ್ ಗಳಲ್ಲಿ ತಾಯಿ ಭುವನೇಶ್ವರಿಯ ದೇವಿಯ ಭಾವಚಿತ್ರಗಳನ್ನು ಅಬಕಾರಿ ಇಲಾಖೆ ಹಾಗೂ ಪರಿಷತ್ತಿನ ಹೆಸರಿನಲ್ಲಿ ಮಾರಾಟ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ದೂರು ನೀಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ತಿಳಿದ್ದಾರೆ.
ಖ್ಯಾತ ಚಿತ್ರ ಕಲಾವಿದ ಬಿ.ಕೆ.ಎಸ್. ಶರ್ಮಾ ಚಿತ್ರಿಸಿದ ತಾಯಿ ಭುವನೇಶ್ವರಿಯ ಭಾವಚಿತ್ರ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಒತ್ತಾಸೆಯಂತೆ ಮಾರಾಟ ಮಳಿಗೆಯಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಅಂತರ್ಜಾಲ ತಾಣಗಳಲ್ಲಿ ಎಲ್ಲರ ಕೈಗೆಟಕುವ ರೀತಿಯಲ್ಲಿ ಲಭ್ಯವಿದೆ ಎಂದು ಹೇಳಲಾಗಿತ್ತು.
ಇದನ್ನು ಸಹ ಕೆಲವರು ಡೌನ್ಲೋಡ್ ಮಾಡಿ ಹಂಚಿದ್ದು ಕನ್ನಡ ಸಾಹಿತ್ಯ ಪರಿಷತ್ತಿಗೆ ಬಂದಿದೆ. ಕೆಲವು ಸಮಾಜ ಘಾತುಕರು ಕನ್ನಡದ ಹೆಸರಿನಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಗಳನ್ನು ಬಾರ್ ಗಳಿಗೆ ಮಾರಾಟ ಮಾಡುದ್ದಾರೆ.
ಇನ್ನೂ ಕೆಲವು ಕಡೆಗಳಲ್ಲಿ ಅಬಕಾರಿ ಇಲಾಖೆಯವರೇ ಮಾರಿದ್ದಾರೆ ಎನ್ನುವ ಮಾಹಿತಿಗಳು ಮಾದ್ಯಮಗಳಲ್ಲಿ ಸುದ್ದಿಯಾಗಿದೆ ಎಂದು ಅವರು ಹೇಳಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತಿಗೆ ನಾಡಿನಲ್ಲಿ ಅಪಾರವಾದ ಗೌರವ ಮತ್ತು ಜವಾಬ್ದಾರಿ ಇದೆ.
ಈ ಹಿನ್ನೆಲೆಯಲ್ಲಿ ವಿಷಯ ಅರಿತ ತಕ್ಷಣ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಹಾಗೂ ಅಬಕಾರಿ ಆಯುಕ್ತರಿಗೆ ಕನ್ನಡ ಸಾಹಿತ್ಯ ಪರಿಷತ್ತು ದೂರು ನೀಡಿದ್ದು, ತಕ್ಷಣ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜೋಷಿ ಒತ್ತಾಯಿಸಿದರು.
ಕನ್ನಡಿಗರ ಭಾವನೆಗಳ ಜೊತೆ ಆಟವಾಡುತ್ತಿರುವವರನ್ನು ಹುಡುಕಿ ಕನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ದೂರು ನೀಡಿದೆ ಎಂದು ಅವರು ತಿಳಿಸಿದರು.