
ಬೆಂಗಳೂರು: ಪ್ರೇಮ ವೈಫಲ್ಯದಿಂದ ಮನನೊಂದು ಪಿಯುಸಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಸಂಜನಾ (17) ಆತ್ಮಹತ್ಯೆಗೆ ಶರಣಾದವರು. ಸೆ.28ರಂದು ಲಗ್ಗೆರೆಯ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಜನಾ ಸಾವಿಗೆ ಆಕೆಯನ್ನು ಪ್ರೀತಿಸುತ್ತಿದ್ದ ಹರೀಶ್ ಎಂಬಾತನೇ ಕಾರಣ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಹರೀಶ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸುಂಕದಕಟ್ಟೆಯ ಖಾಸಗಿ ಕಾಲೇಜಿನಲ್ಲಿ ಸಂಜನಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಆಗಸ್ಟ್ 26ರಂದು ಕಾಲೇಜಿಗೆ ಹೋಗಿದ್ದ ಆಕೆ ವಾಪಸ್ ಮನೆಗೆ ಬಂದಿರಲಿಲ್ಲ.
ಇದರಿಂದ ಗಾಬರಿಯಾದ ಪೋಷಕರು ಸ್ನೇಹಿತರ ಮನೆಗಳಲ್ಲಿ ಹುಡುಕಾಡಿ ಅಂತಿಮವಾಗಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ನಡೆಸಿದ್ದ ಪೊಲೀಸರು ಪರಿಚಯಸ್ಥ ಹರೀಶ್ ಎಂಬಾತನ ಜತೆ ಸಂಜನಾ ಇರುವುದನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದರು. ಬಳಿಕ ಸಂಜನಾಳನ್ನು ಪೋಷಕರ ವಶಕ್ಕೆ ನೀಡಿ ಕಳುಹಿಸಿದ್ದರು.
ಈ ಘಟನೆ ಆದ ಬಳಿಕ ಸಂಜನಾಳನ್ನು ಲಗ್ಗೆರೆಯಲ್ಲಿರುವ ಅವರ ಅಣ್ಣನ ಮನೆಯಲ್ಲಿ ಇರಿಸಲಾಗಿತ್ತು. ಸೆ.28ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸಂಜನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನಾ ಸ್ಥಳದಲ್ಲಿ ಸಂಜನಾ ಸಾಯುವ ಮುನ್ನ ಬರೆದಿಟ್ಟಿರುವ ಡೆತ್ನೋಟ್ ಪತ್ತೆಯಾಗಿದ್ದು ‘ಲೈಫ್ ಈಸ್ ಪ್ರಾಬ್ಲಮ್ಸ್ ಮಿಸ್ ಯೂ ತಾತ’ ಎಂದು ಬರೆದಿದ್ದಾರೆ. ಯಾರ ಮೇಲೂ ಆರೋಪಗಳನ್ನು ಮಾಡಿಲ್ಲ.
ಸಂಜನಾಗೆ ಅವರ ತಾತನೆಂದರೆ ಬಹಳ ಇಷ್ಟ. ಹೀಗಾಗಿ ತಾತನಿಗೆ ಅಂತಿಮ ಸಂದೇಶ ತಿಳಿಸಿದ್ದಾಳೆ’ ಎಂದು ಅವರ ಕುಟುಂಬಸ್ಥರ ವಿಚಾರಣೆ ವೇಳೆ ಗೊತ್ತಾಗಿದೆ.
ಹರೀಶ್ನನ್ನು ಪ್ರೀತಿಸುತ್ತಿದ್ದ ಸಂಜನಾ ಬೇರ್ಪಟ್ಟ ಬಳಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ.
ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಸಂಜಾನಾಳನ್ನು ಪ್ರೀತಿಸುತ್ತಿದ್ದ ಹರಿಶ್ ಮೂಲತಃ ನಾಗಮಂಗಲ ತಾಲೂಕಿನ ಕರಡನಹಳ್ಳಿ ನಿವಾಸಿಯಾಗಿದ್ದಾನೆ.
ಸಂಜನಾ ತಾಯಿಯದ್ದೂ ಅದೇ ಸ್ವಂತ ಊರಾಗಿದೆ. ಬ್ಯಾಡರಹಳ್ಳಿ ಠಾಣೆಯಿಂದ ಮಗಳನ್ನು ಮನೆಗೆ ಕರೆತಂದು ಕರಡನಹಳ್ಳಿಗೆ ಕರೆದೊಯ್ಯಲಾಗಿತ್ತು.
ಈ ವೇಳೆ ಅಲ್ಲಿದ್ದ ಹರೀಶ್ ಹಾಗೂ ಅವರ ಚಿಕ್ಕಪ್ಪ ‘ನಿನ್ನನ್ನು ಇನ್ನು ಯಾರೂ ಮದುವೆ ಆಗುವುದಿಲ್ಲ.
ನಾನೇ ಆಗಬೇಕು. ಇಲ್ಲದಿದ್ದರೆ ಪಾಳು ಬಾವಿಗೆ ಬಿದ್ದು ಸಾಯಬೇಕು’ ಎಂದು ಆತ್ಮಹತ್ಯೆಗೆ ಪ್ರಚೋದಿಸಿ ಬೈದಿದ್ದರು. ಇದೇ ಕಾರಣಕ್ಕೆ ಮನನೊಂದು ಸಂಜನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹೀಗಾಗಿ,ಹರೀಶ್ ಮತ್ತಿತರರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಸಂಜನಾ ತಾಯಿ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿಗಳ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿ ಹೇಳಿದರು.