ನಿಶ್ಚಿತಾರ್ಥ ಮುಗಿಸಿ ವಾಪಸ್ ಆಗಿದ್ದ ವೇಳೆ ಭೀಕರ ಅಪಘಾತ ಸ್ಥಳದಲ್ಲೇ 7 ಮಂದಿ ಸಾವು.

ಧಾರವಾಡ: ನಿಶ್ಚಿತಾರ್ಥ ಮುಗಿಸಿ ಮನೆ ಕಡೆ ಹೊರಟ್ಟಿದ್ದ ಹಾದಿಯಲ್ಲಿ ತಡರಾತ್ರಿ ಕಾದು ಕುಳಿತಿದ್ದ ಜವರಾಯ 7 ಜನರ ಜೀವ ತೆಗೆದುಕೊಂಡು ಹೊರಟುಬಿಟ್ಟಿದ್ದಾನೆ. ಧಾರವಾಡದಲ್ಲಿ ತಡರಾತ್ರಿ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ನಿಶ್ಚಿತಾರ್ಥ ಮುಗಿಸಿ ಮನೆಗೆ ಮರಳುತ್ತಿದ್ದವರು ಮಸಣ ಸೇರಿದ್ದಾರೆ.
ಧಾರವಾಡದ ನಿಗದಿ ಗ್ರಾಮದ ಬಳಿ ಮರಕ್ಕೆ ಕ್ರೂಸರ್ ಡಿಕ್ಕಿಯಾದ ಪರಿಣಾಮ 7 ಮಂದಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟರನ್ನು ಅನನ್ಯ (14) , ಹರೀಶ (13), ಶಿಲ್ಪಾ (34), ನೀಲವ್ವ (60), ಮಧುಶ್ರೀ (20), ಮಹೇಶ್ವರಯ್ಯ (11), ಶಂಭುಲಿಂಗಯ್ಯ (35) ಎಂದು ಗುರುತಿಸಲಾಗಿದ್ದು, ಸಾವನ್ನಪ್ಪಿದರೆಲ್ಲರೂ ನಿಗದಿ ಗ್ರಾಮಸ್ಥರಾಗಿದ್ದಾರೆ.ರೇವಣಸಿದ್ದೇಶ್ವರ ಮಠದಿಂದ ವಾಪಸ್ ಬರ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅನಾಹುತ ನಡೆದಿದೆ. ಸದ್ಯ ಅಪಘಾತದಲ್ಲಿ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4 ಮಂದಿ ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.ಅಪಘಾತದ ವಾಹನದಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಇಂದು ಬಾಡ ಗ್ರಾಮದ ರೇವಣಸಿದ್ದೇಶ್ವರ ಮಠದಲ್ಲಿ ನಿಗದಿ ಗ್ರಾಮದ ದಾಸನಕೊಪ್ಪ ಕುಟುಂಬದವರು ಮದುವೆ ಕಾರ್ಯಕ್ರಮ ನಿಗದಿ ಪಡಿಸಿದ್ದರು. ಅಪಘಾತ ಸ್ಥಳಕ್ಕೆ ಧಾರವಾಡ ಎಸ್.ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನಸೂರ ಗ್ರಾಮದಿಂದ ಬೆನಕನಕಟ್ಟಿಗೆ ಹೋಗುವಾಗ ಘಟನೆ ನಡೆದಿದೆ.ಒಟ್ಟು 7 ಜನ ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಡಿಕ್ಕಿಯಾಗಿದೆ. ಮೃತರ ಬಗ್ಗೆ ಮಾಹಿತಿ ಕಲೆ ಹಾಕುತಿದ್ದಾರೆ. ಗಾಯಾಳುಗಳಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.