ನಕಲಿ ದಾಖಲಾತಿ ಸೃಷ್ಟಿಸಿ ನಿವೇಶನ ಮಾರಾಟ ಮಾಡುತ್ತಿದ್ದ ಐವರು ಬಂಧನ
duplicate documentation sell site Five arrested

ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಹೆಸರುಗಳನ್ನು ಬದಲಿಸಿಕೊಂಡು ನಿವೇಶನಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಐದು ಮಂದಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರೇಣುಗೋಪಾಲ್ (49), ಗೌರಮ್ಮ (48), ಶಂಕರ್ (44), ಎಂ.ಪ್ರಕಾಶ್ (50) ಮತ್ತು ಶಾಂತರಾಜು (43) ಬಂಧಿತರು.
ಆರೋಪಿಗಳಿಂದ ನಕಲಿ ಆಧಾರ್ ಕಾರ್ಡ್, ಪಾನ್ಕಾರ್ಡ್, ಬ್ಯಾಂಕ್ ಪಾಸ್ಬುಕ್ಗಳ ನಕಲಿ ಪ್ರತಿಗಳು ಹಾಗೂ ನೋಂದಾಯಿತ ಕಾಗದ ಪತ್ರಗಳ ನಕಲು ಪ್ರತಿಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಯಲಹಂಕ ಹೋಬಳಿ ಚಿಕ್ಕಬೆಟ್ಟಹಳ್ಳಿ ಗ್ರಾಮದ ಸರ್ವೆ ನಂ.27/1ರಲ್ಲಿ ವಿಂಗಡಿಸಿರುವ ಶ್ರೀ ಸಾಯಿ ಲೇಔಟ್ನಲ್ಲಿರುವ ಸೈಟ್ ನಂ.56ನೇ ನಿವೇಶನವನ್ನು 2015ನೇ ಸಾಲಿನಲ್ಲಿ ಡಾ.ಎನ್.ಗಿರಿ ದಂಪತಿ ಯಿಂದ ಕಾರ್ತಿಕ್ ಎಂಬುವವರ ಹೆಸರಿಗೆ ಕ್ರಯ ಪತ್ರವಾಗಿದೆ.
ಇದೇ ಸ್ವತ್ತಿಗೆ ಸಂಬಂಧಿಸಿದಂತೆ ಆರೋಪಿಗಳು ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಮಾರಾಟ ಮಾಡಿರುವ ಬಗ್ಗೆ ಕಾರ್ತಿಕ್ ಅವರ ಬಾಮೈದ ರಂಜಿತ್ ಎಂಬು ವರು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಾಗ, ಶಂಕರ್ ಎಂಬಾತ ಟಿ.ನಾಗರಾಜ್ ಎಂದು , ಗೌರಮ್ಮ ಎಂಬಾಕೆ ಜಯಲಕ್ಷ್ಮಿ ಎಂದು, ರೇಣುಗೋಪಾಲ್ ಎಂಬಾತ ವೇಣುಗೋಪಾಲ್ ಎಂದು ಹೆಸರು ಬದಲಿಸಿಕೊಂಡಿರುವುದು ಗೊತ್ತಾಗಿದೆ.
2016ರ ಜೂನ್ 6ರಂದು ನಾಗರಾಜ್, ಜಯಲಕ್ಷ್ಮಿ ಎಂಬುವರು ವೇಣುಗೋಪಾಲ್ಗೆ ಈ ನಿವೇಶನವನ್ನು ದಾನಪತ್ರ ಮಾಡಿರುವುದಾಗಿ, 2019ರ ಜೂನ್17ರಂದು ಭಾಸ್ಕರ್ ಎಂಬುವರಿಗೆ ವೇಣುಗೋಪಾಲ್ ಕ್ರಯಪತ್ರ ಮಾಡಿಕೊಟ್ಟಿರುವುದು ತನಿಖೆಯಿಂದ ತಿಳಿದು ಬಂದಿದೆ.ಭಾಸ್ಕರ್ ಅವರು ಮುನಿಲಕ್ಷ್ಮಮ್ಮ ಮತ್ತು ಕುಶಾಲ್ ಎಂಬುವರಿಗೆ 2020ರ ಆಗಸ್ಟ್ 21ರಂದು ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.
ಪ್ರಕರಣದ ತನಿಖೆ ಚುರುಕು ಗೊಳಿಸಿದ ಪೊಲೀಸರು ವೇಣುಗೋಪಾಲ್ ಎಂಬಾತನನ್ನು ಬಂಸಿ ವಿಚಾರಣೆ ಮಾಡಿದಾಗ ಆತನ ನಿಜವಾದ ಹೆಸರು ರೇಣುಗೋಪಾಲ್ ಎಂಬುದು ಗೊತ್ತಾಗಿದೆ. ಈತ ದಾಸರಹಳ್ಳಿ ಅಗ್ರಹಾರದ ಬಸವೇಶ್ವರನಗರ ಮುಖ್ಯರಸ್ತೆ, 5ನೇ ಮುಖ್ಯರಸ್ತೆಯ 13ನೇ ಕ್ರಾಸ್ನಲ್ಲಿ ವಾಸವಾಗಿರುವುದನ್ನು ಪತ್ತೆಹಚ್ಚಿ ವಿಚಾರಣೆಗೊಳಪಡಿಸಿದಾಗ ಈ ಪ್ರಕರಣದ ಪ್ರಮುಖ ಸೂತ್ರದಾರ ತಮ್ಮ ಸ್ನೇಹಿತ ಪ್ರಕಾಶ್ ಎಂಬುದು ತಿಳಿದು ಬಂದಿದೆ.
ಆರೋಪಿ ಪ್ರಕಾಶ್ ರಾಜಾಜಿನಗರ ವೆಸ್ಟ್ಆಫ್ ಕಾರ್ಡ್ ರಸ್ತೆಯ ಇಂಡಸ್ಟ್ರಿ ಯಲ್ ಟೌನ್ನಲ್ಲಿ ವಾಸವಾಗಿದ್ದು, ಆಟೋ ಕನ್ಸಲ್ಟೆಂಟ್ ಕೆಲಸ ಮಾಡಿಕೊಂಡಿರುತ್ತಾರೆ. ಪ್ರಕಾಶ್ ಸ್ನೇಹಿತನಾದ ಶಾಂತರಾಜು ವಿದ್ಯಾರಣ್ಯಪುರದ ಎಎಂಎಸ್ ಲೇಔಟ್ನಲ್ಲಿ ವಾಸವಾಗಿದ್ದು, ಸುಮಾರು ವರ್ಷಗಳಿಂದ ಖಾಲಿ ಇರುವ ನಿವೇಶನಗಳನ್ನು ಗುರುತಿಸಿ ಅಕ್ಕಪಕ್ಕ ವಿಚಾರ ಮಾಡಿ ವಾರಸುದಾರರು ಸುಮಾರು ವರ್ಷಗಳಿಂದ ಜಾಗಕ್ಕೆ ಬರುತ್ತಿಲ್ಲ ಎಂಬುದನ್ನು ತಿಳಿದು ಕೊಳ್ಳುತ್ತಿದ್ದನು.
ನಂತರ ಸಬ್ರಿಜಿಸ್ಟ್ರಾರ್ ಕಚೇರಿ ಗಳಿಂದ ನೊಂದಾಯಿತ ಪ್ರತಿಗಳನ್ನು ಪಡೆದುಕೊಂಡು ಸೈಟ್ನ ಮಾಲೀಕರ ಹೆಸರುಗಳಲ್ಲಿ ಅಸಲಿ ವ್ಯಕ್ತಿಗಳ ಬದಲಿಗೆ ನಕಲಿ ವ್ಯಕ್ತಿಗಳನ್ನು ತೋರಿಸಿ ಸಬ್ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಾನ ಪತ್ರ ಮಾಡಿಕೊಂಡು ಸ್ವತ್ತನ್ನು ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡಿ ಹಣ ಸಂಪಾದನೆಯಲ್ಲಿ ತೊಡಗಿದ್ದದ್ದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಪ್ರಮುಖ ಆರೋಪಿಗಳಾದ ರೇಣುಗೋಪಾಲ್ ಅಲಿಯಾಸ್ ವೇಣುಗೋಪಾಲ್ ಇದೇ ರೀತಿಯಾಗಿ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವೇಶನವೊಂದಕ್ಕೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಅಕ್ರಮವೆಸಗಿದ್ದು, ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಆರೋಪಿಗಳ ಬಂಧನದಿಂದ ಒಟ್ಟು ಎರಡು ಪ್ರಕರಗಳು ಪತ್ತೆಯಾದಂತಾಗಿದೆ.ವಿದ್ಯಾರಣ್ಯಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅನಿಲ್ಕುಮಾರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.