ರಾಜ್ಯ

ಡ್ರೈನೇಜ್ ನಲ್ಲಿ ಸಿಲುಕಿದ ಬೀದಿನಾಯಿಯ ಆಕ್ರಂದನ

ಬೆಂಗಳೂರು: ನಗರದ ವಿಜಯನಗರದ ಅತ್ತಿಗುಪ್ಪೆಯಲ್ಲಿರುವ ಬಿನ್ನಿ ಎಂಪ್ಲಾಯೀಸ್ ಲೇಔಟ್ ನ 3ನೇ ಕ್ರಾಸ್ ನಲ್ಲಿ ಕನ್ನಡ ರಾಜ್ಯೋತ್ಸವದ ದಿನ ಬೆಳಗ್ಗೆ ಸುಮಾರು ಆರೂವರೆ ಗಂಟೆಯಲ್ಲಿ, ನಾಯಿಯೊಂದರ ಆರ್ತನಾದ.

ಬೆಳಗಿನ ಚುಮುಚುಮು ಚಳಿಯಿಂದಾಗಿ ಎಲ್ಲರೂ ಮನೆಗಳಲ್ಲೇ ಬೆಚ್ಚಗೇ ಇರುವಾಗ ಇಂಥದ್ದೊಂದು ಆರ್ತನಾದ ಎಲ್ಲರನ್ನೂ ಬಲವಂತವಾಗಿ ಹೊರಗೆ ತಂದಿತು.ಹಾಗೆ ಬಂದು ನೋಡಿದವರಿಗೆ ಬೀದಿ ನಾಯಿಯೊಂದು, ಒಳಚರಂಡಿಯಲ್ಲಿ ಸಿಲುಕಿದ್ದು ಕಂಡಿತು.

ಇಡೀ ಏರಿಯಾದಲ್ಲಿ ಎಲ್ಲೂ ಓಪನ್ ಇದರ ಆ ಒಳಚರಂಡಿಯೊಳಗೆ ಅದ್ಯಾವ ಕಡೆಯಿಂದ ಒಳನುಗ್ಗಿತ್ತೋ ಏನೋ ಗೊತ್ತಿಲ್ಲ ಇಲ್ಲಿನ ಒಳಚರಂಡಿಗಳಲ್ಲಿ ಹೆಗ್ಗಣಗಳು ಓಡಾಡುತ್ತವೆ.

ಅದನ್ನು ಹಿಡಿಯಲು ಅದು ಬಹುಶಃ ಲೇ ಔಟ್ ನ ಬೇರೆ ಯಾವುದೋ ಕಡೆ ಕೊಂಚ ಓಪನ್ ಇರುವ ಕಡೆಗೆ ಒಳಗೆ ನುಗ್ಗಿದ ಅದು ಆನಂತರ ತಾನು ಯಾವ ಕಡೆಯಿಂದ ಬಂದೆ ಎಂಬುದನ್ನು ಮರೆತುಹೋಗಿ ಇಡೀ ಚರಂಡಿಯೊಳಗೆ ಓಡಾಡುತ್ತಾ ಚೀರಾಡುತ್ತಾ ಇದೆ ಎಂದು ಅಂದಾಜಿಸಬಹುದಿತ್ತು.ನಾಯಿಯ ಆರ್ತನಾದ ಕೇಳಿ ಒಂದಿಷ್ಟು ಜನರು ಜಮಾಯಿಸಿ, ಅದನ್ನು ಹೊರತಗೆಯುವ ಬಗ್ಗೆ ಚರ್ಚೆಸಿದರು.

ಆದರೆ, ಅದು ಅಷ್ಟು ಸುಲಭವಾಗಿರಲಿಲ್ಲ. ಚರಂಡಿಯು ಫುಲ್ ಸೀಲ್ಡ್ ಆಗಿದ್ದ ಹಿನ್ನೆಲೆಯಲ್ಲಿ ಅದನ್ನು ಚರಂಡಿಯ ಮೇಲೆ ಹೊದಿಸಿರುವ ಬಂಡೆಗಳನ್ನು ತೆಗೆದೇ ಹೊರತಗೆಯಬೇಕಿತ್ತು. ಆದರೆ, ಬಂಡೆಗಳು ಪರಸ್ಪರ ಸಿಮೆಂಟ್ ಸೀಲಿಂಗ್ ನಿಂದ ಭದ್ರವಾಗಿ ಮುಚ್ಚಲ್ಪಟ್ಟಿರುವುದರಿಂದ ಮೇಲಾಗಿ ಅದು ಬಿಬಿಎಂಪಿ ವ್ಯಾಪ್ತಿಗೆ ಒಳಪಡುವುದರಿಂದ ಅದನ್ನು ಬಿಬಿಎಂಪಿ ಗಮನಕ್ಕೆ ತರಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿತ್ತು.

ಆದರೆ, ಬಿಬಿಎಂಪಿಗೆ ತಿಳಿಸುವವರಾರು ಎಂಬ ಪ್ರಶ್ನೆ ಎದುರಾಗಿ ಬಿಬಿಎಂಪಿ ಕಂಟ್ರೋಲ್ ರೂಂ ಗೆ ಕೆಲವರು ಫೋನಾಯಿಸಿದರಾದರೂ ಅತ್ತ ಕಡೆಯಿಂದ ಫೋನು ರಿಸೀವ್ ಮಾಡುವವರು ಯಾರೂ ಇರಲಿಲ್ಲ. ಹೇಳಿಕೇಳಿ ಇವತ್ತು ನವೆಂಬರ್ 1. ಕನ್ನಡ ರಾಜ್ಯೋತ್ಸವ. ಸಾಮಾನ್ಯ ದಿನಗಳಲ್ಲೇ ಆ ಫೋನ್ ನಂಬರ್ ಗಳಿಗೆ ಫೋನಾಯಿಸಿದರೆ ಯಾರೂ ಫೋನ್ ರಿಸೀವ್ ಮಾಡೋದಿಲ್ಲ.

ಇನ್ನು, ಸರ್ಕಾರಿ ರಜಾದಿನದಂದು ರಿಸೀವ್ ಮಾಡ್ತಾರೆಯೇ… ಹೀಗೆ ಗೊಣಗಿಕೊಂಡ ಜನರು, ತಾವು ಅಸಹಾಯಕರು ಎಂಬರ್ಥದಲ್ಲಿ ಅಲ್ಲಿಂದ ಜಾಗ ಖಾಲಿ ಮಾಡಲಾರಂಭಿಸಿದರು.ಜನರು ಜಮಾಯಿಸಿದ್ದಾಗ… ಇಷ್ಟು ಜನ ಬಂದಿದ್ದಾರೆ. ಯಾರಾದರೂ ನನ್ನನ್ನು ಪಾರು ಮಾಡುತ್ತಾರೆ ಎಂದಂದುಕೊಂಡು ಸುಮ್ಮನಿದ್ದ ನಾಯಿ, ಜನರು ಜಾಗ ಖಾಲಿ ಮಾಡಲಾರಂಭಿಸಿದ ಕೂಡಲೇ ಮತ್ತೆ ತನ್ನ ಆರ್ತನಾದ ಶುರು ಮಾಡಲಾರಂಭಿಸಿತು.

ಅಯ್ಯೋ ಯಾಕೆ ಮಾರಾಯ್ರೆ, ಸುಮ್ಮನೇ ಹೋಗ್ತಾ ಇದ್ದೀರಿ. ದಯವಿಟ್ಟು ಹಾಗೆ ಮಾಡಬೇಡಿ. ಪ್ಲೀಸ್ ನನ್ನನ್ನು ಕಾಪಾಡಿ ಎನ್ನುವಂತಿತ್ತು ಅದರ ಅಳು.ಅಂತರ್ಜಾಲದಲ್ಲಿ animal rescue workers in bengaluru ಅಂತ ಸರ್ಚ್ ಕೊಟ್ಟಾಗ ಒಂದಿಷ್ಟು ನಂಬರ್ ಗಳು ಸಿಕ್ಕವು. ಅವುಗಳಲ್ಲಿ ವಿಜಯ ನಗರಕ್ಕೆ ಹತ್ತಿರವಾಗಿರುವ ಸಂಸ್ಥೆಯೊಂದರ ಸಂಖ್ಯೆಗೆ ಫೋನಾಯಿಸಿದಾಗ ಅಲ್ಲಿಂದ ಪಾಸಿಟಿವ್ ರೆಸ್ಪಾನ್ಸ್ ಬಂತು.

ಆದರೆ, ಅಷ್ಟರಲ್ಲಿ ನಾಯಿ ತಾನು ಸಿಲುಕಿಕೊಂಡಿದ್ದ ಜಾಗದಿಂದ ಮಾಯವಾಗಿದೆ. ಇಲ್ಲಿದ್ದು ಉಪಯೋಗವಿಲ್ಲ ಎಂದಂದುಕೊಂಡು ಅದು ಡ್ರೈನೇಜ್ ನೊಳಗೇ ನಡೆದುಕೊಂಡು ಬೇರೆ ಕಡೆಗೆ ಹೋಯಿತಾ ಅಥವಾ ಅದಕ್ಕೆ ಅಲ್ಲೆಲ್ಲಾದರೂ ಪಾರಾಗುವಂಥ ಮಾರ್ಗ ಸಿಕ್ಕಿತಾ ಗೊತ್ತಿಲ್ಲ.ಆದರೆ, ಇಡೀ ವಿದ್ಯಮಾನ…. ನಮ್ಮೊಳಗೊಂದು ಪ್ರಶ್ನೆಯನ್ನು ಹುಟ್ಟುಹಾಕಿತು.

ಮೂಕಪ್ರಾಣಿಗಳ ವೇದನೆಗೆ ಕ್ಷಿಪ್ರವಾಗಿ ಸ್ಪಂದಿಸುವ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲವೇ ಅಂತ. ಈ ಪ್ರಶ್ನೆಯನ್ನು ಕೇಳಿದಾಕ್ಷಣ ನಿಮಗೆ ನಗು ಬರಬಹುದು. ಏಕೆಂದರೆ, ಮನುಷ್ಯರಿಗೆ ಇಲ್ಲಿ ಸ್ಪಂದನೆಯಿಲ್ಲ, ಇನ್ನು ಪ್ರಾಣಿಗಳಿಗೆ ಇರುತ್ತದಾ ಅಂತ. ವಿಚಾರ ಹಾಗಲ್ಲ.

ಸ್ಪಂದನೆಗಳು ಮನುಷ್ಯರಿಗೂ ಸಿಗಬೇಕು, ಪ್ರಾಣಿಗಳಿಗೂ ಸಿಗಬೇಕು. ಒಂದು ಸಮಾಜದಲ್ಲಿ ನಾವು ಜೀವಿಸುತ್ತಿದ್ದೇವೆ ಎಂದರೆ ಎಲ್ಲರಿಗೂ ಸಮಾನ ಸ್ಪಂದನೆಗಳು ಸಿಗಬೇಕಲ್ಲವೇ ಎಂಬುದು ನಾಗರಿಕರ ಅಭಿಪ್ರಾಯ?

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button