ರಾಜ್ಯ

ಡೋಲೊ-650 ಶಿಫಾರಸಿಗೆ ₹1,000 ಕೋಟಿಯ ಗಿಫ್ಟ್‌, ಸುಪ್ರೀಂಗೆ ಮಾಹಿತಿ

ರೋಗಿಗಳಿಗೆ ನಿರ್ದಿಷ್ಟ ಕಂಪನಿಗಳ ಔಷಧ ಶಿಫಾರಸು ಮಾಡಲು ವೈದ್ಯರಿಗೆ ಕಂಪನಿಗಳು ಅನೈತಿಕವಾಗಿ ಆಮಿಷ ಒಡ್ಡುತ್ತಿವೆ ಎಂಬ ಆರೋಪಗಳ ಕುರಿತಂತೆ ಸುಪ್ರೀಂ ಕೋರ್ಟ್‌ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

ನಿರ್ದಿಷ್ಟ ಔಷಧಗಳನ್ನೇ ಶಿಫಾರಸು ಮಾಡುವಂತೆ ವೈದ್ಯರಿಗೆ ಆಮಿಷವೊಡ್ಡುವ ಫಾರ್ಮಾಸ್ಯುಟಿಕಲ್‌ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿತು.

ಫೆಡರೇಶನ್ ಆಫ್ ಮೆಡಿಕಲ್ & ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಈ ಅರ್ಜಿಯನ್ನು ಸಲ್ಲಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಸಂಜಯ್‌ ಪರೀಖ್‌, ಬೆಂಗಳೂರು ಮೂಲದ “ಮೈಕ್ರೋ ಲ್ಯಾಬ್ಸ್‌ ಕಂಪನಿಯು ವೈದ್ಯರಿಗೆ ತನ್ನ ‘ಡೋಲೊ-650’ ಮಾತ್ರೆಗಳನ್ನೇ ನೀಡುವಂತೆ 1 ಸಾವಿರ ಕೋಟಿ ರೂ. ಮೌಲ್ಯದ ಕಾಣಿಕೆಗಳನ್ನು ನೀಡಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆರೋಪಿಸಿದೆ,” ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಎ.ಎಸ್‌. ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ”ನನಗೂ ಕೂಡ ಕೋವಿಡ್‌ ಸೋಂಕು ತಗುಲಿದಾಗ ಇದೇ ಮಾತ್ರೆಯನ್ನು ನೀಡಲಾಗಿತ್ತು.

ಇದೊಂದು ಗಂಭೀರ ವಿಚಾರ,” ಎಂದರು. ಅಲ್ಲದೇ ಕೇಂದ ಸರ್ಕಾರ ಈ ಬಗ್ಗೆ 10 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ನಿರ್ದೇಶನ ನೀಡಿದರು.ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಒಂಬತ್ತು ರಾಜ್ಯಗಳಾದ್ಯಂತ ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್‌ನ 36 ಆವರಣಗಳಲ್ಲಿ ದಾಳಿ ನಡೆಸಿದ ನಂತರ ಈ ಆರೋಪ ಮಾಡಿದೆ.

ಔಷಧ ತಯಾರಕರ ವಿರುದ್ಧ ಅನೈತಿಕ ಅಭ್ಯಾಸಗಳನ್ನು ಆರೋಪಿಸಿರುವ ಸಿಬಿಡಿಟಿ 300 ಕೋಟಿ ರೂ.ಗಳಷ್ಟು ತೆರಿಗೆ ವಂಚನೆಯನ್ನೂ ಪತ್ತೆಹಚ್ಚಿದೆ ಎಂದು ಪರೀಖ್‌ ನ್ಯಾಯಾಲಯದ ಗಮನ ಸೆಳೆದರು.

ಇಂತಹ ಅಭ್ಯಾಸಗಳು ಔಷಧಗಳ ಅತಿಯಾದ ಬಳಕೆಗೆ ಕಾರಣವಾಗುವುದಲ್ಲದೆ, ರೋಗಿಗಳ ಆರೋಗ್ಯಕ್ಕೆ ಧಕ್ಕೆ ತರಬಹುದು ಎಂದು ಮನವಿಯಲ್ಲಿ ಹೇಳಲಾಗಿದೆ; ಇಂಥಹ ಭ್ರಷ್ಟಾಚಾರವು ಮಾರುಕಟ್ಟೆಯಲ್ಲಿ ಔಷಧಗಳ ಹೆಚ್ಚಿನ ಬೆಲೆಗೂ ಕಾರಣವಾಗುತ್ತದೆ.

ಅಸ್ತಿತ್ವದಲ್ಲಿರುವ ನಿಯಮಗಳ ಸ್ವಯಂಪ್ರೇರಿತ ಸ್ವಭಾವದಿಂದಾಗಿ ಫಾರ್ಮಾ ಕಂಪನಿಗಳ ಅನೈತಿಕ ಅಭ್ಯಾಸಗಳು ಪ್ರವರ್ಧಮಾನಕ್ಕೆ ಬರುತ್ತಿವೆ ಮತ್ತು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿಯೂ ಇವು ಹೊರಹೊಮ್ಮಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಮೇಲ್ವಿಚಾರಣಾ ಕಾರ್ಯವಿಧಾನ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಒದಗಿಸುವ ಮೂಲಕ ಔಷಧಗಳ ಮಾರುಕಟ್ಟೆ ಅಭ್ಯಾಸಗಳಿಗೆ ಏಕರೂಪದ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಅರ್ಜಿಯು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಪೀಠವು ಈ ಸಂಬಂಧ ಹಿಂದೇಯೇ ಕೇಂದ್ರಕ್ಕೆ ನೋಟಿಸ್ ನೀಡಿತ್ತು. ಹೀಗಾಗಿ ಗುರುವಾರ ಕೇಂದ್ರದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಪ್ರತಿಕ್ರಿಯೆ ಬಹುತೇಕ ಸಿದ್ಧವಾಗಿದೆ ಎಂದರು.

ಆದರೆ, ಸುಪ್ರೀಂ ಕೋರ್ಟ್‌ ವಿಚಾರಣೆಯನ್ನು ಮುಂದೂಡಿತು. ಈ ಪ್ರಕರಣವನ್ನು ಸೆಪ್ಟೆಂಬರ್ 29 ರಂದು ಸರ್ವೋಚ್ಚ ನ್ಯಾಯಾಲಯ ಮತ್ತೆ ವಿಚಾರಣೆ ನಡೆಸಲಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button