ಜೈ ಭೀಮ್ ಚಿತ್ರದ ನಟ ಸೂರ್ಯ, ಪತ್ನಿ ಜ್ಯೋತಿಕಾ, ನಿರ್ದೇಶಕರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಕೋರ್ಟ್ ಆದೇಶ
ಚೆನ್ನೈ: ತಮಿಳು ನಟ ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾದಲ್ಲಿ ನಲ್ಲಿ ವನ್ನಿಯಾರ್ ಸಮುದಾಯವನ್ನು ತಪ್ಪಾಗಿ ನಿರೂಪಿಸಿದ ಆರೋಪದಡಿ ಚಿತ್ರದ ನಾಯಕ ನಟ ಸೂರ್ಯ ಮತ್ತು ಪತ್ನಿ ಜ್ಯೋತಿಕಾ, ನಿರ್ದೇಶಕ ಟಿಜೆ ಜ್ಞಾನವೇಲ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಚೆನ್ನೈನ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.
ಈ ಸಂಬಂಧ ರುದ್ರ ವನ್ನಿಯಾರ್ ಸೇನೆ ಎಂಬ ವನ್ನಿಯಾರ್ ಗುಂಪು ಅರ್ಜಿ ಸಲ್ಲಿಸಿದ್ದು, ಸಿನಿಮಾದಲ್ಲಿ ಸಮುದಾಯದ ಜನರನ್ನು ಅತ್ಯಂತ ಕೀಳುಮಟ್ಟದಲ್ಲಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಏಪ್ರಿಲ್ 29 ರಂದು ಚೆನ್ನೈ ಸೈದಾಪೇಟ್ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆಗೆ ಬಂದಿತು. ವರದಿಗಳ ಪ್ರಕಾರ, ಅರ್ಜಿದಾರರ ವಾದವನ್ನು ಆಲಿಸಿದ ನ್ಯಾಯಾಲಯವು ಸೂರ್ಯ, ಜ್ಯೋತಿಕಾ ಮತ್ತು ಜ್ಞಾನವೇಲ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ. ಮುಂದಿನ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಲಾಗಿದೆ.
ಈ ಹಿಂದೆ, ವನ್ನಿಯಾರ್ ಸಮುದಾಯದ ಪ್ರತಿಷ್ಠೆಗೆ ಕಳಂಕ ತಂದ ಆರೋಪದ ಮೇಲೆ ರಾಜಕೀಯ ಸಂಘಟನೆ ಪಟ್ಟಾಲಿ ಮಕ್ಕಳ್ ಕಚ್ಚಿಯಿಂದ 5 ಕೋಟಿ ರೂಪಾಯಿ ಪರಿಹಾರಕ್ಕೆ ಒತ್ತಾಯಿಸಿ ಸೂರ್ಯ ಅವರಿಗೆ ಲೀಗಲ್ ನೋಟಿಸ್ ನೀಡಲಾಗಿತ್ತು.
ಸಂಘರ್ಷದ ಮುಖ್ಯ ಮೂಲವು ಉರಿಯುತ್ತಿರುವ ಬೆಂಕಿ ಚಿಹ್ನೆಯೊಂದಿಗೆ ಕ್ಯಾಲೆಂಡರ್ ಅನ್ನು ತೋರಿಸುವ ದೃಶ್ಯದಿಂದ ಉಂಟಾಗುತ್ತದೆ. ಈ ಚಿಹ್ನೆಯು ವನ್ನಿಯಾರ್ ಸಮುದಾಯವನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ. ಈ ದೃಶ್ಯವು ಮುಖ್ಯ ಖಳನಾಯಕ, ಭ್ರಷ್ಟ ಪೋಲೀಸ್ ತಮ್ಮ ಸಮುದಾಯಕ್ಕೆ ಸೇರಿದವರು ಎಂದು ಸೂಚಿಸುತ್ತದೆ ಎಂದು ಆರೋಪಿಸಿದ್ದಾರೆ.
ನೀವು ಹೇಳಿದ ದುಷ್ಟರನ್ನು, ತಪ್ಪು ಮಾಡಿದವರನ್ನು ವನ್ನಿಯಾರ್ ಸಮುದಾಯಕ್ಕೆ ಸೇರಿದವರಂತೆ ಬಿಂಬಿಸಿದ್ದೀರಿ, ಆ ಮೂಲಕ ವನ್ನಿಯಾರ್ ಸಮುದಾಯದವರು ತಪ್ಪು ಮತ್ತು ಕಾನೂನುಬಾಹಿರ ಕೆಲಸಗಳಿಗೆ ಗುರಿಯಾಗುತ್ತಾರೆ ಎಂದು ಆರೋಪಿಸಿದ್ದೀರಿ. ಸಬ್ ಇನ್ಸ್ ಪೆಕ್ಟರ್ ವನ್ನಿಯಾರ್ ಗೆ ಸೇರಿದವರಲ್ಲ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ