ಜಾರ್ಖಂಡ್ ಸಿಎಂ ಅನರ್ಹತೆಗೆ ಚುನಾವಣಾ ಆಯೋಗ ಶಿಫಾರಸು?: ವದಂತಿ ಎಂದ ಸೊರೇನ್

ಗಣಿಗಾರಿಕೆಗೆ ಗುತ್ತಿಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಶಾಸಕ ಸ್ಥಾನದಿಂದ ಅಹರ್ನಗೊಳಿಸುವಂತೆ ಚುನಾವಣಾ ಆಯೋಗ ಶಿಫಾರಸು ಮಾಡಿದೆ ಎಂಬ ವದಂತಿ ಹರಿದಾಡಿದೆ. ಆದರೆ, ಇದನ್ನು ಸೊರೇನ್ ನಿರಾಕರಿಸಿದ್ದು, ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳ ಕಚೇರಿಗೆ ಚುನಾವಣಾ ಆಯೋಗದಿಂದಾಗಲಿ ರಾಜ್ಯಪಾಲರಿಂದಾಗಲಿ ಯಾವುದೇ ಸಂದೇಶ ಬಂದಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಬಿಜೆಪಿ ಸಂಸದರೊಬ್ಬರು ಸೇರಿದಂತೆ ಆ ಪಕ್ಷದ ನಾಯಕರು ಮತ್ತು ಅವರ ಕೈಗೊಂಬೆಯಾಗಿರುವ ಪತ್ರಕರ್ತರು ಚುನಾವಣಾ ಆಯೋಗದ ಹೆಸರಿನಲ್ಲಿ ನಕಲಿ ವರದಿ ಸಿದ್ಧಪಡಿಸಿರಬೇಕು. ಇಲ್ಲವಾದರೆ ಅದು ಮುಚ್ಚಿದ ಲಕೋಟೆಯಲ್ಲಿರಬೇಕಿತ್ತು ಎಂದು ಸೊರೇನ್ ಹೇಳಿರುವುದಾಗಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಇದು ಸಾಂವಿಧಾನಿಕ ಸಂಸ್ಥೆಗಳು ಮತ್ತು ಅಧಿಕಾರಿಗಳ ದುರ್ಬಳಕೆ. ದೀನದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯು ಸಾಂವಿಧಾನಿಕ ಸಂಸ್ಥೆಗಳನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿರುವುದು ದೇಶದ ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ’ ಎಂದು ಸೊರೇನ್ ಟೀಕಿಸಿದ್ದಾರೆ.
ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಚುನಾವಣಾ ಆಯೋಗವು ರಾಜ್ಯಪಾಲರಿಗೆ ಶಿಫಾರಸು ಮಾಡಿದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದು ಗಮನಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಜಾರಿ ನಿರ್ದೇಶನಾಲಯ ದಾಳಿ ಕುರಿತಾದ ಸುದ್ದಿಗಳನ್ನು ಪ್ರಸಾರ ಮಾಡುವ ವೇಳೆ ಉದ್ದೇಶಪೂರ್ವಕವಾಗಿ ಹೇಮಂತ್ ಸೊರೇನ್ ಅವರ ಹೆಸರನ್ನು ಗಂಟುಹಾಕುವ ಪ್ರಯತ್ನವನ್ನು ಕೆಲವು ಮಾಧ್ಯಮಗಳು ನಡೆಸಿವೆ ಎಂದು ಆರೋಪಿಸಿರುವ ಜಾರ್ಖಂಡ್ ಸರ್ಕಾರ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಕೇಂದ್ರ ತನಿಖಾ ಸಂಸ್ಥೆಗಳು ನಡೆಸುತ್ತಿರುವ ಕಾರ್ಯಾಚರಣೆಗೆ ಜಾರ್ಖಂಡ್ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಮತ್ತು ಮಾಧ್ಯಮಗಳ ಸ್ವಾತಂತ್ರ್ಯವನ್ನು ಗೌರವಿಸಲಾಗುವುದು ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ತಿಳಿಸಿದ್ದಾರೆ.