
ಚೆನ್ನೈ: ಚೆನ್ನೈನ ಸೇಂಟ್ ಥಾಮಸ್ ಮೌಂಟ್ ರೈಲ್ವೆ ನಿಲ್ದಾಣದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಪಾಗಲ್ ಪ್ರೇಮಿಯೊಬ್ಬ ಚಲಿಸುತ್ತಿದ್ದ ರೈಲಿನ ಮುಂದೆ ತಳ್ಳಿ 20 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ್ದಾನೆ.
ಚೆನ್ನೈ ಬೀಚ್ಗೆ ಹೋಗುವ ರೈಲು ಹತ್ತಲು ಕಾಲೇಜು ವಿದ್ಯಾರ್ಥಿನಿ ಕಾಯುತ್ತಿದ್ದಳು. ಈ ವೇಳೆ 32 ವರ್ಷದ ಆರೋಪಿ ಆಕೆಯನ್ನು ರೈಲು ಬರುತ್ತಿದ್ದ ವೇಳೆ ತಳ್ಳಿದ್ದಾನೆ. ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ವರದಿ ಪ್ರಕಾರ ಸಾವನ್ನಪ್ಪಿದ ವಿದ್ಯಾರ್ಥಿನಿ ಅಡಂಬಕ್ಕಂನ ಎಸ್. ಸತ್ಯಾ ಎಂದು ಗುರುತಿಸಲಾಗಿದೆ. ಈಕೆ ಮಹಿಳಾ ಕಾನ್ಸ್ಟೆಬಲ್ನ ಮಗಳಾಗಿದ್ದು, ನಗರದ ಕಾಲೇಜಿನಲ್ಲಿ ಓದುತ್ತಿದ್ದಳು ಎಂದು ತಿಳಿದುಬಂದಿದೆ. ಆರೋಪಿಯನ್ನು ಆಲಂದೂರಿನ ಡಿ.ಸತೀಶ್ ಎಂದು ಗುರುತಿಸಲಾಗಿದೆ.
ಈತನ ತಂದೆ ದಯಾಳನ್ ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿದ್ದಾರೆ. ಮೃತ ಯುವತಿಯನ್ನು ಸತೀಶ್ ಒನ್ಸೈಡ್ ಲವ್ ಮಾಡುತ್ತಿದ್ದ ಎನ್ನಲಾಗಿದೆ.
ಮಧ್ಯಾಹ್ನದ ವೇಳೆ ಆರೋಪಿಯು ರೈಲ್ವೆಗಾಗಿ ಕಾಯುತ್ತಿದ್ದ ಸತ್ಯಾಳ ಜೊತೆಗೆ ತೀವ್ರ ವಾಗ್ವಾದ ನಡೆಸಿದ್ದಾನೆ. ಬಳಿಕ ತಾಂಬರಂನಿಂದ ಎಗ್ಮೋರ್ ಕಡೆಗೆ ಚಲಿಸುತ್ತಿದ್ದ ರೈಲಿನ ಮುಂದೆ ಆಕೆಯನ್ನು ಏಕಾಏಕಿ ತಳ್ಳಿದ್ದಾನೆ. ಪರಿಣಾಮ ರೈಲಿನ ಚಕ್ರಗಳ ಅಡಿಯಲ್ಲಿ ಸಿಲುಕಿ ಸತ್ಯಾ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.
ತಕ್ಷಣವೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರೀತಿಯ ವಿಚಾರವಾಗಿ ಸತ್ಯಾ ಮತ್ತು ಆರೋಪಿ ಡಿ.ಸತೀಶ್ ನಡುವೆ ಜಗಳ ನಡೆಯುತ್ತಿದ್ದ ಬಗ್ಗೆ ಕುಟುಂಬದವರಿಗೂ ತಿಳಿದಿತ್ತು ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕರಿಂದ ಮಾಹಿತಿ ಪಡೆದ ತಾಂಬರಂ ಮತ್ತು ಮಾಂಬಲಂ ರೈಲು ನಿಲ್ದಾಣದ ಸರ್ಕಾರಿ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ರೈಲ್ವೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿ ವಿ.ವನಿತಾ ಮಾತನಾಡಿದ್ದು, ‘ಆರೋಪಿಯನ್ನು ಪತ್ತೆಹಚ್ಚು ಪ್ರಯತ್ನ ನಡೆಯುತ್ತಿದೆ. ಶೀಘ್ರವೇ ನಾವು ಆತನನ್ನು ಬಂಧಿಸುತ್ತೇವೆ’ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳಷ್ಟೇ ಯುವತಿ ಸತ್ಯಾಳ ನಿಶ್ಚಿತಾರ್ಥವಾಗಿತ್ತು. ಯುವತಿಯ ತಾಯಿ ಎಂ.ರಾಜಲಕ್ಷ್ಮಿಯವರು ಆಡಂಬಕ್ಕಂ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿದ್ದಾರೆ.
ಸತ್ಯಾ ಅವರ ತಾಯಿಯ ಸಹೋದರಿ, ಅವರ ತಾಯಿಯ ಚಿಕ್ಕಪ್ಪ ಮತ್ತು ಅವರ ಚಿಕ್ಕಮ್ಮ ಎಲ್ಲರೂ ನಗರ ಪೊಲೀಸ್ನ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.