ಕಾಬೂಲ್ನ ಗುರುದ್ವಾರದಲ್ಲಿ ಬಾಂಬ್ ಸ್ಪೋಟ, ಗುಂಡಿನ ದಾಳಿ
many trapped inside Kabul Gurdwara in Islamic State attack

ತಾಲಿಬಾನಿಗಳ ಹಿಡಿತದಲ್ಲಿರುವ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಸಿಕ್ ಗುರುದ್ವಾರದಲ್ಲಿ ಬಾಂಬ್ ಸ್ಪೋಟಿಸಿದ್ದು, ಗುಂಡಿನ ದಾಳಿ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕಾಬೂಲ್ನ ಕರ್ತಾ ಪರ್ವಾನ್ ಪ್ರದೇಶದಲ್ಲಿರುವ ಗುರುದ್ವಾರದ ಎದುರು ಮೊದಲು ಬಾಂಬ ಸ್ಪೋಟ ಸಂಭವಿಸಿದೆ, ನಂತರ ಗುಂಡಿನ ದಾಳಿಯೂ ನಡೆದಿದೆ ಎಂದು ಟೋಲೋ ನ್ಯೂಸ್ ವೀಡಿಯೊದೊಂದಿಗೆ ಟ್ವೀಟ್ ಮಾಡಿದೆ.
ಕಾರ್ಟ್-ಎ-ಪರ್ವಾನ್ ನೆರೆಹೊರೆವರು ಸ್ಥಳೀಯ ಕಾಲಮಾನ ಸುಮಾರು 6 ಗಂಟೆ ವೇಳೆಗೆ ದೊಡ್ಡ ಸ್ಪೋಟದ ಸದ್ದು ಕೇಳಿದ್ದಾರೆ. ಸ್ಪೋಟದ ನಂತರ ಮತ್ತೊಂದು ಸ್ಪೋಟ ಸಂಭವಿಸಿದೆ. ಸ್ಪೋಟದಿಂದ ದಟ್ಟವಾದ ಹೊಗೆ ಉಂಟಾಗಿದ್ದು, ಭಯದ ವಾತಾವರಣ ನಿರ್ಮಾಣ ಮಾಡಿತ್ತುಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ನಂತರ 7.15ರ ಸುಮಾರಿಗೆ ಗುಂಡಿನ ದಾಳಿ ಆರಂಭವಾಗಿದೆ. ಗುಂಡಿನ ದಾಳಿಗೆ ಪ್ರತಿಯಾಗಿ ಭದ್ರತಾ ಪಡೆಗಳು ಪ್ರತಿ ಗುಂಡುಗಳನ್ನು ಸಹ ಹಾರಿಸಿವೆ. ಘಟನೆಯಲ್ಲಿ 60 ವರ್ಷದ ಸವೀಂದ್ರರ್ ಸಿಂಗ್ ಮತ್ತು ಗುರುದ್ವಾರದ ಭದ್ರತಾ ಸಿಬ್ಬಂದಿ ಹತ್ಯೆಯಾಗಿದ್ದಾರೆ. ತಾಲಿಬಾನ್ನ ಮೂವರು ಯೋಧರು ಗಾಯಗೊಂಡಿದ್ದಾರೆ. ಇಬ್ಬರು ದಾಳಿಕೋರರನ್ನು ಭದ್ರತಾ ಪಡೆಗಳು ಬಂಸಿವೆ. ಗುರುದ್ವಾರದ ಒಳಗೆ ಇನ್ನೂ ಏಳೆಂಟು ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮುಂಜಾಗ್ರತೆಯಾಗಿ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿವೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ. ಪವಿತ್ರ ಗುರುದ್ವಾರದ ಮೇಲಿನ ದಾಳಿ ಹಿನ್ನೆ¯ಯಲ್ಲಿ ನಾವು ತೀವ್ರ ಕಳವಳ ಹೊಂದಿದ್ದೇವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಹೆಚ್ಚಿನ ವಿವರಗಳು ಮತ್ತು ನಂತರದ ಬೆಳವಣಿಗೆಗಳಿಗಾಗಿ ಕಾಯುತ್ತಿದ್ದೇವೆ ಎಂದು ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ತಾಲಿಬಾನ್ನ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಾಕೋರ್, ದಾಳಿಯನ್ನು ದೃಢಪಡಿಸಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಗುರುದ್ವಾರದ ಸಮೀಪದ ಮೇಲಿನ ದಾಳಿಯನ್ನು ತಕ್ಷಣಕ್ಕೆ ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ.
ಆಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶ ಪಡಿಸಿಕೊಂಡ ಬಳಿಕ ಅಲ್ಪಸಂಖ್ಯಾತರು ದೇಶ ತೊರೆದಿದ್ದಾರೆ. ಇನ್ನೂ 140 ಸಿಖ್ಖರು ಆಫ್ಘಾನಿಸ್ತಾನದಲ್ಲೇ ಉಳಿದಿದ್ದಾರೆ. ಈಗ ಮತ್ತೆ ಅವರ ಸುರಕ್ಷತೆ ಬಗ್ಗೆ ಆತಂಕ ಸೃಷ್ಟಿಯಾಗಿದೆ.
ಮಾರ್ಚ್ 2020 ರಲ್ಲಿ ಕಾಬೂಲ್ ಹೃದಯಭಾಗದಲ್ಲಿರುವ ಪ್ರಮುಖ ಗುರುದ್ವಾರಕ್ಕೆ ಭಾರಿ ಶಸ್ತ್ರಸಜ್ಜಿತ ಆತ್ಮಾಹುತಿ ಬಾಂಬರ್ ದಾಳಿ ಮಾಡಿ ಕನಿಷ್ಠ 25 ಆರಾಧಕರು ಸಾವನ್ನಪ್ಪಿದರು. ಎಂಟು ಜನರು ಗಾಯಗೊಂಡರು, ಇದು ದೇಶದಲ್ಲಿ ಅಲ್ಪಸಂಖ್ಯಾತ ಸಿಖ್ ಸಮುದಾಯದ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಾಗಿತ್ತು. ಶೋರ್ ಬಜಾರ್ ಪ್ರದೇಶದಲ್ಲಿ ನಡೆದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿತ್ತು. ಈಗ ಗುರುದ್ವಾರದ ಮೇಲೆ ನಡೆದಿರುವ ದಾಳಿಯ ಹಿಂದೆಯೂ ಇಸ್ಲಾಮಿಕ್ ಸ್ಟೇಟ್ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.