ಒಡಿಶಾದ ಬುಡಕಟ್ಟು ಪ್ರದೇಶದಿಂದ ರೈಸಿನಾ ಹಿಲ್ ವರೆಗೆ ಮುರ್ಮು ಪಯಣ..

ದ್ರೌಪದಿ ಮುರ್ಮು ಅವರು ಈಗ ದೇಶದ ಉನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಪದವಿಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ಮತ್ತು ಒಟ್ಟಾರೆಯಾಗಿ ಎರಡನೇ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2022 ರ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ದ್ರೌಪದಿ ಮುರ್ಮು ಅವರು ಈಗ ಬಹುಮತದ ಮೂಲಕ ಮೂಲಕ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು ಅವರು ಜಾರ್ಖಂಡ್ನ ಮೊದಲ ಮಹಿಳಾ ರಾಜ್ಯಪಾಲರಾಗಿ 2015 ರಿಂದ 2021 ರವರೆಗೆ ಸೇವೆ ಸಲ್ಲಿಸಿದರು.
ದ್ರೌಪದಿ ಮುರ್ಮು ಅವರ ರಾಜಕೀಯ ಜೀವನ: ಜೂನ್ 20, 1958 ರಂದು ಒಡಿಶಾದ ಹಿಂದುಳಿದ ಜಿಲ್ಲೆಯ ಮಯೂರ್ಭಂಜ್ ಗ್ರಾಮದ ಬಡ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಮುರ್ಮು ಅವರು ಹಲವಾರು ಏರಿಳಿತಗಳ ನಡುವೆಯೂ ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ಬಿಎ ಪದವಿಯನ್ನು ಪಡೆದರು. ಮುರ್ಮು ಅವರು 1979 ಮತ್ತು 1983 ರ ನಡುವೆ ನೀರಾವರಿ ಮತ್ತು ವಿದ್ಯುತ್ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಸೇವೆ ಸಲ್ಲಿಸಿದರು.
ರಾಯರಂಗಪುರ ಎನ್ಎಸಿ ಉಪಾಧ್ಯಕ್ಷರಾಗಿ ನೇಮಕವಾಗುವ ಮೂಲಕ ರಾಜಕೀಯ ಜೀವನಕ್ಕೆ ಪ್ರವೇಶಿಸಿದ ಮುರ್ಮು, 2000 ಮತ್ತು 2004 ರ ನಡುವೆ ರಾಯರಂಗ್ಪುರದಿಂದ ಒಡಿಶಾ ವಿಧಾನಸಭೆಯ ಕಾರ್ಯನಿರ್ವಹಿಸಿದರು, ಅಷ್ಟೇ ಅಲ್ಲದೆ ಅವರು ಸಚಿವರಾಗಿ ಸಾರಿಗೆ ಮತ್ತು ವಾಣಿಜ್ಯ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಖಾತೆಗಳನ್ನು ನಿರ್ವಹಿಸಿದರು.
2004 ರಿಂದ 2009 ರವರೆಗೆ ಒಡಿಶಾ ವಿಧಾನಸಭೆಯಲ್ಲಿ ಮತ್ತೊಮ್ಮೆ ಶಾಸಕರಾಗಿ ಸೇವೆ ಸಲ್ಲಿಸಿದರು. 2007 ರಲ್ಲಿ ಒಡಿಸ್ಸಾ ವಿಧಾನಸಭೆಯು ಮುರ್ಮು ಅವರ ಕಾರ್ಯವೈಖರಿಯನ್ನು ಮೆಚ್ಚಿ ಅತ್ಯುತ್ತಮ ಶಾಸಕರಿಗೆ ನೀಡುವ ನೀಲಕಂಠ ಪ್ರಶಸ್ತಿಯನ್ನುನೀಡಿ ಗೌರವಿಸಿತು.
ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮುರ್ಮು ಅವರು 1997 ರಲ್ಲಿ ರಾಜ್ಯ ಎಸ್ಟಿ ಮೋರ್ಚಾದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಲ್ಲದೆ 2013- 15 ರವರೆಗೆ ಬಿಜೆಪಿಯ ಎಸ್ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರಾಗುವ ಪಕ್ಷದ ಸಂಘಟನೆಯಲ್ಲಿ ಸಕ್ರೀಯರಾಗಿದ್ದರು. 2010 ಮತ್ತು 2013 ರಲ್ಲಿ ಮಯೂರ್ಭಂಜ್ (ಪಶ್ಚಿಮ) ನ ಬಿಜೆಪಿ ಜಿಲ್ಲಾ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸಿದರು.
2006 ಮತ್ತು 2009 ರ ನಡುವೆ, ಅವರು ಒಡಿಶಾದಲ್ಲಿ ಬಿಜೆಪಿಯ ಎಸ್ಟಿ ಮೋರ್ಚಾದ ಮುಖ್ಯಸ್ಥರಾಗಿದ್ದರು. ಜೊತೆಗೆ ಅವರು 2002 ರಿಂದ 2009 ರವರೆಗೆ ಬಿಜೆಪಿ ಎಸ್ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದರು.