ಎಸಿಬಿಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿರುವುದಕ್ಕೆ ನನಗೆ ವರ್ಗಾವಣೆ ಬೆದರಿಕೆ ಬಂದಿದೆ ಎಂದ ಹೈಕೋರ್ಟ್ ನ್ಯಾ. ಎಚ್.ಪಿ. ಸಂದೇಶ್

ಬೆಂಗಳೂರು: ಕಳೆದ ವಾರವಷ್ಟೇ ಭ್ರಷ್ಟಾಚಾರ ನಿಗ್ರಹ ದಳ ‘ವಸೂಲಿ ಕೇಂದ್ರ’ವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಸೋಮವಾರ ಮತ್ತೆ ಎಸಿಬಿಯಲ್ಲಿನ ಅಕ್ರಮಗಳನ್ನು ಖಾರವಾಗಿ ಪ್ರಶ್ನಿಸಿದೆ.
ಅಲ್ಲದೆ, ಈ ರೀತಿ ಎಸಿಬಿ ತರಾಟೆಗೆ ತೆಗೆದುಕೊಂಡಿದ್ದಕ್ಕೆ ನನಗೆ ವರ್ಗಾವಣೆ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಸ್ಫೋಟಕ ಹೇಳಿಕೆ ನೀಡಿರುವ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ‘ಜನರ ಹಿತ ಮತ್ತು ನ್ಯಾಯಕ್ಕಾಗಿ ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧನಿದ್ದೇನೆ’ ಎಂದು ಖಡಕ್ ಆಗಿ ನುಡಿದಿದ್ದಾರೆ.

ಲಂಚ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪತಹಸೀಲ್ದಾರ್ ಪಿ.ಎಸ್. ಮಹೇಶ್ ಜಾಮೀನು ಅರ್ಜಿಯನ್ನು ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯಪೀಠ ಸೋಮವಾರ ವಿಚಾರಣೆ ನಡೆಸಿತು.
ಜೂ. 29ರಂದು ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳು, 2016ರಿಂದ ಈವರೆಗೆ ಎಷ್ಟು ಅಧಿಕಾರಿಗಳ ವಿರುದ್ಧ ‘ಬಿ’ ರಿಪೋರ್ಟ್ ಸಲ್ಲಿಸಿದೆ ಎಂಬ ಬಗ್ಗೆ ವಸ್ತುಸ್ಥಿತಿ ವರದಿ ನೀಡಬೇಕು. ಸ್ವತಃ ಕಳಂಕಿತ ವ್ಯಕ್ತಿಯಾಗಿರುವ ಎಸಿಬಿ ಎಡಿಜಿಪಿಯ ‘ಸರ್ವಿಸ್ ರೆಕಾರ್ಡ್’ ಹಾಜರುಪಡಿಸುವಂತೆ ತಾಕೀತು ಮಾಡಿದ್ದರು.
ಬೆದರಿಕೆಗೆ ಮಣಿಯಲ್ಲ
ಸೋಮವಾರ ಅರ್ಜಿ ವಿಚಾರಣೆಗೆ ಬಂದಾಗ ಹಿಂದಿನ ಸೂಚನೆಯಂತೆ ಎಸಿಬಿ ಸಲ್ಲಿಸಿರುವ ‘ಬಿ’ ರಿಪೋರ್ಟ್ ವರದಿಗಳನ್ನು ಎಸಿಬಿ ಪರ ವಕೀಲರು ಹಾಜರುಪಡಿಸಲಿಲ್ಲ. ಆಗ ಸಿಟ್ಟಿಗೆದ್ದ ನ್ಯಾಯಮೂರ್ತಿ, “ಎಸಿಬಿಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿರುವುದಕ್ಕೆ ನನಗೆ ವರ್ಗಾವಣೆ ಬೆದರಿಕೆ ಬಂದಿದೆ. ಈ ಹಿಂದೆ ನ್ಯಾಯಾಧೀಶರೊಬ್ಬರನ್ನು ವರ್ಗಾಯಿಸಲಾಗಿದೆ ಎಂದು ಹೇಳುವ ಮೂಲಕ ಬೆದರಿಕೆ ಹಾಕಲಾಗಿದೆ. ಎಸಿಬಿಯ ಎಡಿಜಿಪಿ ಪವರ್ ಫುಲ್ ಅಂತೆ. ವ್ಯಕ್ತಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಹೈಕೋರ್ಟ್ನ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳೇ ನನಗೆ ವರ್ಗಾವಣೆಯ ಬೆದರಿಕೆಯಿದೆ ಎಂದು ತಿಳಿಸಿದ್ದಾರೆ. ವರ್ಗಾವಣೆ ಮಾಡಿಸುವ ಬೆದರಿಕೆಯನ್ನೂ ಆದೇಶದಲ್ಲಿ ಬರೆಸುತ್ತೇನೆ. ಜನರ ಒಳಿತಾಗಿ ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧನಿದ್ದೇನೆ,” ಎಂದು ಗುಡುಗಿದರು.
ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧ
“ಯಾರ ಹೆದರಿಕೆಯೂ ನನಗಿಲ್ಲ. ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧನಿದ್ದೇನೆ. ಜಡ್ಜ್ ಆದ್ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನ್ಯಾಯಮೂರ್ತಿ ಹುದ್ದೆ ಹೋದರೂ ಚಿಂತೆಯಿಲ್ಲ. ನಾನು ರೈತನ ಮಗ. ಉಳುಮೆ ಮಾಡಿ ಜೀವನ ಸಾಗಿಸಲೂ ಸಿದ್ಧನಿದ್ದೇನೆ. 500 ರೂಪಾಯಿಯಲ್ಲಿ ಜೀವನ ನಡೆಸುವುದು ಗೊತ್ತಿದೆ. 50 ಸಾವಿರ ಹಣದಲ್ಲೂ ಜೀವನ ನಡೆಸುವುದೂ ಗೊತ್ತಿದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಸಂವಿಧಾನಕ್ಕೆ ಮಾತ್ರ ಬದ್ಧನೇ ಹೊರತು ಯಾವುದೇ ಪಕ್ಷದ ಸಿದ್ಧಾಂತಕ್ಕೂ ಬದ್ಧನಲ್ಲ,” ಎಂದರು.
ಭ್ರಷ್ಟಾಚಾರದ ಕ್ಯಾನ್ಸರ್ ಗುಣಪಡಿಸಬೇಕು
“ನಮ್ಮಲ್ಲಿ ಭ್ರಷ್ಟಾಚಾರವೆಂಬ ಕ್ಯಾನ್ಸರ್ 3 ಮತ್ತು 4ನೇ ಹಂತ ತಲುಪುವ ಮುನ್ನವೇ ಗುಣಪಡಿಸಬೇಕಿದೆ. ಎಸಿಬಿ ‘ಬಿ’ ರಿಪೋರ್ಟ್ಗಳ ಮಾಹಿತಿ ನೀಡಿಲ್ಲ ಏಕೆ? ಮಾಹಿತಿ ನೀಡಲು ಹಿಂಜರಿಯುವುದೇಕೆ?” ಎಂದು ಪ್ರಶ್ನಿಸಿದರು. ಜುಲೈ 7ರೊಳಗೆ ‘ಬಿ ರಿಪೋರ್ಟ್’ ಸಲ್ಲಿಸುವಂತೆ ಎಸಿಬಿಗೆ ತಾಕೀತು ಮಾಡಿ ವಿಚಾರಣೆ ಮುಂದೂಡಿದರು.
“ಎಸಿಬಿಯು ಸಾರ್ವಜನಿಕರನ್ನು ರಕ್ಷಿಸುತ್ತಿದೆಯೇ ಅಥವಾ ಕಳಂಕಿತರನ್ನು ರಕ್ಷಿಸುತ್ತಿದೆಯೇ? ಭ್ರಷ್ಟಾಚಾರದಲ್ಲಿ ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿರುವಾಗ ಎಸಿಬಿ ಏನು ಮಾಡುತ್ತಿದೆ. ಬಿ ರಿಪೋರ್ಟ್ ಸಲ್ಲಿಸದ್ದಕ್ಕೆ ಮಧ್ಯಾಹ್ನ 2.30ಕ್ಕೆ ರಾಜ್ಯ ಡಿಪಿಆರ್ ಕಾರ್ಯದರ್ಶಿ ಖುದ್ದು ಹಾಜರಿರಬೇಕು. ಎಸಿಬಿ ಎಡಿಜಿಪಿ ಸರ್ವಿಸ್ ರೆಕಾರ್ಡ್ ಹಾಜರುಪಡಿಸಬೇಕು,” ಎಂದು ಸೂಚಿಸಿದರು.
ಮಧ್ಯಾಹ್ನ ವಿಚಾರಣೆ ಆರಂಭವಾಗುತ್ತಿದ್ಧಂತೆಯೇ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಎಸಿಬಿ ಎಡಿಜಿಪಿ ಸರ್ವಿಸ್ ರೆಕಾರ್ಡ್ ವಿವರಗಳನ್ನು ಸಂಜೆ ನೀಡುವುದಾಗಿ ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಜಡ್ಜ್, ”ಅಡ್ವೊಕೇಟ್ ಜನರಲ್ ಅವರೇ ರಾಜ್ಯದಲ್ಲಿ ಏನು ನಡೆಯುತ್ತಿದೆ. ದುಡ್ಡು ಕಲೆಕ್ಷನ್ ಮಾಡಲು ಖಾಸಗಿ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ. ಆ ಬಗ್ಗೆ ಫೋನ್ನಲ್ಲಿ ಸಂಭಾಷಣೆ ಕೂಡ ರೆಕಾರ್ಡ್ ಆಗಿದೆ. ಜಿಲ್ಲಾಧಿಕಾರಿಯ ಒಪ್ಪಿಗೆಯಿಲ್ಲದೆ ಈತ 5 ಲಕ್ಷ ಲಂಚ ಪಡೆಯಲು ಸಾಧ್ಯವೇ,” ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಅಡ್ವೊಕೇಟ್ ಜನರಲ್ ಉತ್ತರಿಸಿ, “ಎಸಿಬಿ ಸಲ್ಲಿಸಿರುವ ಬಿ ರಿಪೋರ್ಟ್ಗಳ ಸಂಪೂರ್ಣ ಮಾಹಿತಿ ನೀಡಲಾಗುವುದು. ಹೈಕೋರ್ಟ್ ಆದೇಶವನ್ನು ಸರಕಾರ ಸಂಪೂರ್ಣವಾಗಿ ಪಾಲಿಸಲಿದೆ. ನೀವು ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ನನ್ನ ಹೇಳಿಕೆ ನ್ಯಾಯಾಲಯ ದಾಖಲಿಸಿಕೊಳ್ಳಬಹುದು,” ಎಂದು ಭರವಸೆ ನೀಡಿದರು.
ಆಗ ನ್ಯಾಯಮೂರ್ತಿ ”ಲಂಚ ಸ್ವೀಕರಿಸುವಾಗ ಪ್ರತ್ಯಕ್ಷವಾಗಿ ಸಿಕ್ಕಿ ಬಿದ್ದವರಿಗೂ ‘ಬಿ ರಿಪೋರ್ಟ್’ ಹಾಕಲಾಗಿದೆ. ಅದು ಹೇಗೆ ಸಾಧ್ಯ? ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದರೂ ಸರ್ಚ್ ಮಾಡುತ್ತಿಲ್ಲ. ಬದಲಿಗೆ ಸರ್ಚ್ ವಾರೆಂಟ್ ತೋರಿಸಿ ಬೆದರಿಸಲಾಗುತ್ತಿದೆ. ವಿಟಮಿನ್ ‘ಎಂ’ ಇದ್ದರೆ ಎಲ್ಲರನ್ನೂ ರಕ್ಷಿಸುತ್ತೀರಿ. ಅಧಿಕಾರಿಗಳಿಂದ ದುಡ್ಡು ತಗೊಂಡು ಪೋಸ್ಟಿಂಗ್ ಕೊಡೋದು ನಿಲ್ಲಿಸಿದರೆ ಎಲ್ಲ ಸರಿಹೋಗುತ್ತದೆ. ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಿದೆ,” ಎಂದರು.
ಐಎಎಸ್ ಅಧಿಕಾರಿಗಳ ಲಾಬಿ
“ಐಎಎಸ್ ಅಧಿಕಾರಿಯೊಬ್ಬರ ಮೇಲೆ ನಡೆಸಿದ ದಾಳಿಯಲ್ಲಿ ನಾಲ್ಕೂವರೆ ಕೋಟಿ ಹಣ ಮತ್ತು 6 ಕೆ.ಜಿ. ಚಿನ್ನ ಸಿಕ್ಕಿತ್ತು. ಆದರೆ, ಎಸಿಬಿ ಮಾತ್ರ ಆ ಕೇಸಿನಲ್ಲಿ ‘ಬಿ ರಿಪೋರ್ಟ್’ ಹಾಕಿದೆ. ಬಿ ರಿಪೋರ್ಟ್ ಹಾಕಿದ್ದೇಕೆ ಎಂದು ಪ್ರಶ್ನಿಸಿದ ನ್ಯಾಯಾಧೀಶರನ್ನು ವರ್ಗಾಯಿಸಲಾಗಿದೆ. ಬೇರೆ ನ್ಯಾಯಾಧೀಶರು ಬಂದ ಮೇಲೆ ಬಿ ರಿಪೋರ್ಟ್ ಅಂಗೀಕರಿಸಲಾಗಿದೆ. ಇದನ್ನೆಲ್ಲಾ ನೋಡಿ ಕಣ್ಮುಚ್ಚಿ ಕೂರುವುದು ಹೇಗೆ? ವರ್ಗಾವಣೆ ಬೆದರಿಕೆ ಬಗ್ಗೆ ಹೇಳಿದವರ ಹೆಸರನ್ನೂ ಬಹಿರಂಗಪಡಿಸುತ್ತೇನೆ. ಎಸಿಬಿಯ ಹಾಲಿ ಎಡಿಜಿಪಿ ಬಂದ ನಂತರ ಎಷ್ಟು ಬಿ ರಿಪೋರ್ಟ್ ಆಗಿದೆ? ಐಎಎಸ್- ಐಪಿಎಸ್ ಲಾಬಿಗೆ ಒಳಗಾಗುತ್ತಿದೆ. ರಾಜ್ಯದಲ್ಲಿಅಧಿಕಾರಿಗಳೇ ದರ್ಬಾರ್ ಮಾಡಲು ಬಿಡಲಾಗಿದೆ,” ಎಂದು ಆಕ್ರೋಶ ಹೊರಹಾಕಿದರು.
ಬೇಲಿಯೇ ಎದ್ದು ಹೊಲ ಮೇಯ್ದರೆ…
ಬೆಂಗಳೂರು ನಗರ ಡಿಸಿ ಲಂಚ ಪ್ರಕರಣದ ವಿಚಾರಣೆಯನ್ನು ಉಲ್ಲೇಖಿಸಿದ ನ್ಯಾಯಮೂರ್ತಿ, “2ನೇ ಆರೋಪಿಯನ್ನು ಕಲೆಕ್ಷನ್ಗೋಸ್ಕರವೇ ನೇಮಿಸಲಾಗಿದೆ. ನೀವು ಸಾರ್ವಜನಿಕರನ್ನು ರಕ್ಷಿಸುತ್ತಿದ್ದೀರಾ ಅಥವಾ ಕಳಂಕಿತರನ್ನಾ? ಕರಿ ಕೋಟ್ ಇರುವುದು ಆರೋಪಿಗಳನ್ನು ರಕ್ಷಿಸಲಿಕ್ಕಲ್ಲ, ಬೇಲಿಯೇ ಎದ್ದು ಹೊಲ ಮೇಯ್ದರೆ ನಾವೇನು ಮಾಡುವುದು? ರಾಜ್ಯಕ್ಕೆ ಅವಮಾನವಾಗುತ್ತಿದ್ದರೂ ಕಳಂಕಿತ ಡಿಸಿಯನ್ನು ರಕ್ಷಿಸುತ್ತಿದ್ದೀರಿ. ಸರಕಾರ ಕೂಡ ಅಪರಾಧದ ಭಾಗವಾಗಿರುವಂತಿದೆ,” ಎಂದು ಹೇಳಿದರು.