
ಬೆಂಗಳೂರು: ಎಂಟಿಎಂ ಮೆಷಿನ್ ಗಳನ್ನು ಗ್ಯಾಸ್ ಕಟ್ಟರ್ ನಿಂದ ಕಟ್ ಮಾಡಿ ಹಣ ದೋಚುತ್ತಿದ್ದ ಖತರ್ನಾಕ್ ಕಳ್ಳನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್ ಮೂಲದ ಸಮರ್ಜೋತ್ ಸಿಂಗ್ ಬಂಧಿತ ಆರೋಪಿ. ಈತ ಕಳೆದ 4-5 ದಿನಗಳಿಂದ ಚಿಕ್ಕಸಂದ್ರದ ಕಾಲೇಜು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ದೋಚಲು ಪ್ಲಾನ್ ಮಾಡಿದ್ದ.
ರಾತ್ರಿಯಾಗುತ್ತಿದ್ದಂತೆ ಎಟಿಎಂ ಸೆಂಟರ್ ಗೆ ನುಗ್ಗಿ ಶೆಟರ್ ಕ್ಲೋಸ್ ಮಾಡಿ ಗ್ಯಾಸ್ ಕಟ್ಟರ್ ನಿಂದ ಮೆಷನ್ ಕಟ್ ಮಾಡಲು ಯತ್ನಿಸಿದ್ದ. ಆದರೆ ಎಟಿಎಂ ಕಾರ್ಡ್ ರೀಡರ್ ಜಾಮ್ ಆಗುತ್ತಿತ್ತು.
ಇದನ್ನು ಹಲವು ಬಾರಿ ಗಮನಿಸಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗುತ್ತಿದ್ದ. ಹೀಗಾಗಿ ಎಟಿಎಂ ನಿರ್ವಹಣೆ ಮಾಡುವ ಏಜೆನ್ಸಿಯವರು ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮತ್ತೆ ಕಳ್ಳತನಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ.
ಸದ್ಯ ಈತನಿಂದ ಕೃತ್ಯಕ್ಕೆ ಬಳಸಿದ್ದ 5 ಕೆಜಿ ತೂಕದ ಗ್ಯಾಸ್ ಸಿಲಿಂಡರ್, ಗ್ಯಾಸ್ ಕಟ್ಟರ್, ಏರ್ ಫಿಲ್ಟರ್ ಮಾಸ್ಕ್, ಕತ್ತಿ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.