ಅಪರಾಧ

ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಯೊಳಗೆ ಆಗಮಿಸಿದ ದರೋಡೆಕೋರರು

ಚಿಂತಾಮಣಿ: ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿರಾತ್ರಿ 10.30ರ ವೇಳೆ ಮನೆಯ ಒಳಗೆ ನುಗ್ಗಿ, ಮನೆಯಲ್ಲಿದ್ದ 11 ವರ್ಷದ ಬಾಲಕ ಸೇರಿದಂತೆ ಮೂವರನ್ನು ಕಟ್ಟಿಹಾಕಿ ಮನೆಯಲ್ಲಿದ್ದ ಬೆಲೆಬಾಳುವ ಒಡವೆ ಮತ್ತು ನಗದನ್ನು ದೋಚಿದ ಪ್ರಸಂಗ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗ ಹೋಬಳಿ, ಉಪ್ಪರಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಂಡ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸೋಮವಾರ ರಾತ್ರಿ ಚಾಂಡ್ರಹಳ್ಳಿ ಗ್ರಾಮದ ನಾರಾಯಣಸ್ವಾಮಿ ಎಂಬವರು ತಮ್ಮ ಹೆಂಡತಿ ಸರಸ್ವತಮ್ಮ ಮತ್ತು ಮಗ ಆಕಾಶ್‌ ರೆಡ್ಡಿ ಅವರೊಂದಿಗೆ ಮನೆಯಲ್ಲಿ ಮಲಗಿರುವಾಗ ರಾತ್ರಿ 10.30ರ ಸಂದರ್ಭದಲ್ಲಿಅಪರಿಚಿತರು ಬಂದು ಬಾಗಿಲು ತೆಗೆಯುವಂತೆ ಮನವಿ ಮಾಡಿದ್ದಾರೆ.

ಯಾರು ಎಂದು ಮನೆಯಿಂದ ಪ್ರಶ್ನಿಸಿದಾಗ ಹೊರಗಿಂದ ನಾವು ಶ್ರೀನಿವಾಸಪುರದಿಂದ ಬಂದಿದ್ದೇವೆ. ಇನ್ವಿಟೇಷನ್‌ ನೀಡಲು ಬಂದಿರುವುದಾಗಿ ಹೇಳಿದ್ದರಿಂದ ಮನೆಯ ಮಾಲೀಕರು ಬಾಗಿಲು ತೆಗೆದಿದ್ದಾರೆ.ಮನೆಯ ಒಳಗೆ ಬಂದವರೇ ನೀರು ತರಲು ಹೇಳಿ ಎಲ್ಲರನ್ನು ಕಟ್ಟಿ ಹಾಕಿ ಕಿರುಚಿದರೆ ಕೊಲ್ಲುವುದಾಗಿ ಬೆದರಿಸಿದ್ದಾರೆ.

ಈ ಸಂದರ್ಭದಲ್ಲಿ ಮನೆಯ ಮಾಲೀಕ ನಾರಾಯಣಸ್ವಾಮಿ ಅವರಿಗೆ ಚಾಕುವಿನಿಂದ ತಿವಿದು ಗಾಯಗೊಳಿಸಿದ್ದಾರೆ ಎಂದು ಸರಸ್ವತಮ್ಮ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ನಾರಾಯಣಸ್ವಾಮಿ ಅವರು ಸರ್ವೇ ಇಲಾಖೆಯಲ್ಲಿ ಸೇವೆ ಮಾಡಿ ನಿವೃತ್ತರಾಗಿದ್ದರು.

ಶ್ರೀನಿವಾಸಪುರದಲ್ಲಿನಾರಾಯಣಸ್ವಾಮಿ ಅವರು ಸೇವೆ ಮಾಡಿದ್ದರು. ಅದನ್ನು ಅರಿತಿದ್ದ ದರೋಡೆಕೋರರು ನಾವು ಶ್ರೀನಿವಾಸಪುರದಿಂದಲೇ ಬಂದಿದ್ದೇವೆ ಎಂದು ಹೇಳಿ ಮನೆಗೆ ನುಗ್ಗಿದ್ದಾರೆ. ಮನೆಯ ಒಳಗೆ ಹೋಗುತ್ತಿದ್ದಂತೆ ಎಲ್ಲರ ಬಾಯಿ ಮತ್ತು ಕೈಗಳಿಗೆ ಪ್ಲಾಸ್ಟರ್‌ಗಳನ್ನು ಹಾಕಿ ಕಿರುಚಬೇಡವೆಂದು ತನ್ನನ್ನು ಬಲವಂತವಾಗಿ ಸೋಪಾದ ಮೇಲೆ ಕುಳ್ಳರಿಸಿ ಎರಡು ಕೈಗಳಿಗೆ ಮತ್ತು ಎರಡು ಕಾಲುಗಳಿಗೆ ಪ್ಲಾಸ್ಟರ್‌ ಸುತ್ತಿ ಟವಲ್‌ನಿಂದ ಸೋಪಾಗೆ ಕಟ್ಟಿಹಾಕಿದ್ದಾರೆ.

ನೀನು ರಿಟೈರ್ಡ್‌ ಆಗಿದ್ದೀಯ, ಅದರಿಂದ ಬಂದ ಹಣ ಎಲ್ಲಿದೆ ಕೊಡು ಎಂದು ಕೇಳಿದ್ದಾರೆ. “ಇಲ್ಲ, ಅದರಿಂದ ನಿವೇಶನ ತೆಗೆದುಕೊಂಡಿದ್ದೇವೆ. ಹಣವಿಲ್ಲ” ಎಂದಾಗ ಅವರಲ್ಲಿದ್ದ ಬೀಗ ಕೇಳಿದ್ದಾರೆ.

ನೀಡದಿದ್ದಾಗ ಅವರೇ ತಮ್ಮಲ್ಲಿದ್ದ ಸುತ್ತಿಗೆ ಮತ್ತಿತರೆ ಉಪಕರಣಗಳಿಂದ ಬೀರುಗಳನ್ನು ಒಡೆದು ಅದರಲ್ಲಿದ್ದ ಸುಮಾರು 30 ಗ್ರಾಂ ಬಂಗಾರದ ನಕ್ಲೇಸು, ಸುಮಾರು 15 ಗ್ರಾಂ ತೂಕದ ಎರಡು ಜತೆ ಓಲೆ, ಸುಮಾರು 20 ಗ್ರಾಂ ತೂಕದ ಎರಡು ಉಂಗುರ, 05 ಗ್ರಾಂ ತೂಕದ ಮಕ್ಕಳ 4 ಉಂಗುರ, ಸುಮಾರು 20 ಗ್ರಾಂ ತೂಕದ ನಾಗರ ಬಿಲ್ಲುಮತ್ತು 8 ಗುಂಡುಗಳು, ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು ತಾಳಿ ಬೊಟ್ಟು, ಎಲ್ಲಾಒಟ್ಟು 145 ಗ್ರಾಂ ತೂಕದ ಬಂಗಾರ ಮತ್ತು ಸುಮಾರು ಒಂದರಿಂದ ಒಂದು ಕಾಲು ಕೆ.ಜಿ.ತೂಕದ ಬೆಳ್ಳಿ ತಟ್ಟೆ, ಬೆಳ್ಳಿ ಮುಖವಾಡ, ಬೆಳ್ಳಿ ಚೆಂಬು, ಬೆಳ್ಳಿ ಉಡುದಾರ, ಎರಡು ಜತೆ ಬೆಳ್ಳಿ ದೀಪಗಳು,ಒಂದು ಜತೆ ಬೆಳ್ಳಿ ಕುಂಕಮ ಬಟ್ಟಲು, ಬೆಳ್ಳಿ ಕಾಲು ಚೈನುಗಳು ಇವುಗಳ ಒಟ್ಟು ಸುಮಾರು 5 ಲಕ್ಷ ರೂಗಳ ಬೆಲೆ ಬಾಳುವ ಬೆಳ್ಳಿ ಒಡವೆ ಹಾಗೂ ಒಪ್ಪೊ ಮತ್ತು ಸಾಮ್‌ಸಂಗ್‌ ಮೊಬೈಲ್‌ಗಳೊಂದಿಗೆ, ಹೊರಗಿಂದ ಮನೆಯ ಚಿಲಕವನ್ನು ಹಾಕಿಕೊಂಡು ಪರಾರಿಯಾಗಿದ್ದಾರೆ.

ಈ ಗುಂಪಿನಲ್ಲಿಒಟ್ಟು 5 ಜನರಿದ್ದು, ಅದರಲ್ಲಿ4 ಜನ 45 ವರ್ಷದ ಒಳಗಿನವರು, ಒಬ್ಬರು ಮಾತ್ರ 60 ವರ್ಷದವರಾಗಿದ್ದು, ಎಲ್ಲರೂ ಕನ್ನಡ ಭಾಷೆಯನ್ನು ಮಾತನಾಡುವವರಾಗಿದ್ದಾರೆ. ಇವರು ದೋಚಿಕೊಂಡು ಹೋದ ನಂತರ ಪಕ್ಕದ ಮನೆಯವರ ಸಹಾಯದಿಂದ ನಾವು ಹೊರಬಂದೆವು.

ಆದಷ್ಟು ಬೇಗ ದರೋಡೆಕೋರರನ್ನು ಪತ್ತೆ ಹಚ್ಚಿ ನಮ್ಮ ವಸ್ತುಗಳನ್ನು ವಾಪಸ್‌ ಕೊಡಿಸಿ ಮತ್ತು ದರೋಡೆಕೋರರಿಗೆ ಸೂಕ್ತ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿಸರಸ್ವತಮ್ಮ ಅವರು ದೂರು ದಾಖಲಿಸಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button