ಅಪರಾಧ
ಆಂಧ್ರದ ರೌಡಿಯ ಕಾರು ಚಾಲಕನ ಮೇಲೆ ಗುಂಡು ಹಾರಿಸಿದ್ದ ಮತ್ತಿಬ್ಬರ ಬಂಧನ

ಆಂಧ್ರಪ್ರದೇಶದ ರೌಡಿ ಶಿವಶಂಕರ ರೆಡ್ಡಿ ಹಾಗೂ ಅವರ ಕಾರು ಚಾಲಕನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಕೆಆರ್ ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ತಂಬಲ ಪಲ್ಲಿ, ಕುರುಬಲಕೋಟದ ವನಮರೆಡ್ಡಿಗಾರುಪಲ್ಲಿ ಗ್ರಾಮದ ನಿವಾಸಿ, ರೌಡಿ ಶಿವಶಂಕರ ರೆಡ್ಡಿ ಹಾಗೂ ಕಾರು ಚಾಲಕ ಅಶೋಕ್ ರೆಡ್ಡಿ ಅವರ ಮೇಲೆ ಡಿ. 8ರಂದು ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ದುಷ್ಕರ್ಮಿಗಳು ಏಕಾಏಕಿ ಪಿಸ್ತೂಲಿನಿಂದ ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದರು.
ಗುಂಡೇಟಿನಿಂದ ಗಾಯಗೊಂಡಿದ್ದ ಅವರಿಬ್ಬರು ಚೇತರಿಸಿಕೊಂಡಿದ್ದಾರೆ.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡ ಕೆಆರ್ ಪುರ ಠಾಣೆ ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದರು. ತನಿಖೆ ಮುಂದುವರೆಸಿ ಇದೀಗ ಮತ್ತಿಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.