ಅಗ್ನಿಪಥ್ ಯೋಜನೆ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕೆ

ಅಗ್ನಿಪಥ್ ಯೋಜನೆ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.ಸಂಸತ್ ಒಪ್ಪಿಗೆ ಪಡೆಯದೇ ಗೆಜೆಟ್ ಅಧಿಸೂಚನೆ ಹೊರಡಿಸದೆ ಅಗ್ನಿಪಥ್ ಯೋಜನೆಯನ್ನು ದೇಶದ ಮೇಲೆ ಹೇರಲಾಗಿದೆ.
ಕೇಂದ್ರ ರಕ್ಷಣಾ ಇಲಾಖೆ ಯೋಜನೆ ಘೋಷಿಸಿ ಜೂ.14ರಂದು ಹೊರಡಿಸಿದ ಅಧಿಸೂಚನೆಯನ್ನು ವಜಾ ಮಾಡುವಂತೆ ಕೋರಿ ವಕೀಲ ಎಂ.ಎಲ್.ಶರ್ಮ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಯುವಕರನ್ನು ನಾಲ್ಕು ವರ್ಷಗಳ ಕಾಲ ಸೇನೆಗೆ ನೇಮಿಸಿಕೊಳ್ಳುವ ಪ್ರಸ್ತಾಪ ಹೊಂದಿರುವ ಅಗ್ನಿಪಥ್ ಯೋಜನೆ ಸಾಂವಿಧಾನಿಕ ಸಿಂಧುತ್ವವನ್ನು ಪಿಐಎಲ್ನಲ್ಲಿ ಪ್ರಶ್ನಿಸಲಾಗಿದೆ.
ಅಗ್ನಿವೀರ್ ಯೋಜನೆಯ ಪ್ರಕಾರ ನಾಲ್ಕು ವರ್ಷಗಳ ಬಳಿಕ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಶೇ.25ರಷ್ಟು ಮಂದಿಯನ್ನು ಭಾರತೀಯ ಸೇನೆಯಲ್ಲಿ ಮುಂದುವರೆಸಲಾಗುತ್ತದೆ.
ಉಳಿದವರನ್ನು ಸಶಸ್ತ್ರ ಪಡೆಗಳಿಂದ ನಿವೃತ್ತಿಗೊಳಿಸಲಾಗುತ್ತದೆ. ಅವರ ಭವಿಷ್ಯದ ಬಗ್ಗೆ ಮನವಿಯಲ್ಲಿ ವಿವರಿಸಲಾಗಿದೆ.ನೇಮಕಾತಿಯಾದ ನಾಲ್ಕು ವರ್ಷಗಳಲ್ಲಿ ವೇತನ, ಇನ್ನಿತರೆ ಸವಲತ್ತುಗಳು ದೊರೆಯುತ್ತವೆ.
ನಾಲ್ಕು ವರ್ಷಗಳ ನಂತರ ಉದ್ಯೋಗ ನಿರಾಕರಿಸಿದರೆ ಅವರಿಗೆ ಯಾವುದೇ ನಿವೃತ್ತಿ ವೇತನ ಇತ್ಯಾದಿ ಸಿಗುವುದಿಲ್ಲ ಎಂದು ಹೇಳಲಾಗಿದೆ.
ದೇಶಾದ್ಯಂತ ಈ ಯೋಜನೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಸಂಸತ್ ಒಪ್ಪಿಗೆ ಮತ್ತು ಗೆಜೆಟ್ ಅಧಿಸೂಚನೆ ಹೊರಡಿಸದೆ ಯೋಜನೆ ಜಾರಿಗೊಳಿಸಲಾಗಿದೆ ಎಂದು ಶರ್ಮ ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.