ರಾಜ್ಯ

ಅಂಜಲ್, ಬಂಗುಡೆ ಭಾರಿ ಅಗ್ಗ: ಬೋಟ್‌ ಮಾಲೀಕರಿಗೆ ನಷ್ಟ, ಮೀನುಪ್ರಿಯರು ಖುಷ್‌

ಮಂಗಳೂರು: ಒಂದೆಡೆ ಬಂಪರ್‌ ಮೀನುಗಾರಿಕೆ. ಇನ್ನೊಂದೆಡೆ ಹಲವರಿಗೆ ನವರಾತ್ರಿ ವ್ರತಾಚರಣೆ. ಹಾಗಾಗಿ ಕರಾವಳಿಯಲ್ಲಿ ಅಂಜಲ್‌, ಬಂಗುಡೆ ಮೀನು ಭಾರಿ ಅಗ್ಗವಾಗಿದೆ.

ಬೋಟ್‌ ಮಾಲೀಕರಿಗೆ ನಷ್ಟವಾದರೆ, ಮೀನು ಪ್ರಿಯರು ಖುಷ್‌ ಆಗಿದ್ದಾರೆ.ಒಂದು ತಿಂಗಳ ಹಿಂದೆ ಕೆಜಿಗೆ ಒಂದು ಸಾವಿರ ರೂ.ಗೆ ಮಾರಾಟವಾಗುತ್ತಿದ್ದ 2-3 ಕೆ.ಜಿ ತೂಗುವ ಅಂಜಲ್‌ ಇವತ್ತು ಕೇವಲ 300-350 ರೂ.ಗೆ ಸಿಗುತ್ತಿದೆ.

ಬಂಗುಡೆ ದರ ತೀರಾ ಇಳಿಕೆ ಕಂಡಿದ್ದು, ಕೆಜಿಗೆ 80 ರೂ.ಗೆ ಮಾರಾಟವಾಗುತ್ತಿದೆ. ಮೀಡಿಯಂ ಬಂಗುಡೆಗೆ ಬೇಡಿಕೆ ಇಲ್ಲದೆ, ಕೆಜಿಗೆ 20 ರೂ.ನಂತರ ಫಿಶ್‌ ಮೀಲ್‌ಗೆ ಮಾರಾಟವಾಗುತ್ತಿದೆ.

ಸಾಧಾರಣ ಗಾತ್ರದ ಬಿಳಿ ಪಾಂಫ್ರೆಟ್‌ ಕೆಜಿಗೆ 500- 600 ರೂ., ದೊಡ್ಡ ಗಾತ್ರದ ಕಪ್ಪು ಪಾಂಫ್ರೆಟ್‌ 400 ರೂ., ಅಡೆ ಮೀನ್‌ 200 ರೂ., ಬೊಳೆಂಜಿರ್‌ 100 ರೂ., ಕಾಣೆ 500 ರೂ., ಬೂತಾಯಿ 50 ಗೆ ಮಾರಾಟವಾಗುತ್ತಿದೆ.

ಕೇವಜ್‌, ಮಾಲಾದಂಥ ಮೀನು ಕೂಡಾ ಕಡಿಮೆ ದರಕ್ಕೆ ಸಿಗುತ್ತಿದೆ. ಹೇರಳ ಮೀನಿನ ಜತೆಗೆ ಭಾರಿ ಗ್ರಾಹಕರಿಂದ ಮಂಗಳೂರು ಮೀನುಗಾರಿಕಾ ದಕ್ಕೆ ಗಿಜಿಗಿಡುತ್ತಿದೆ.

ಕರಾವಳಿಯಾದ್ಯಂತ ಅಂಜಲ್‌, ಬಂಗುಡೆ, ಬೊಳೆಂಜಿರ್‌, ಫಿಶ್‌ ಮೀಲ್‌ಗೆ ಹೋಗುವ ಚಮ್ಮೀನ್‌ ಇತ್ಯಾದಿ 25-30 ಟನ್‌ ಬಂದಿದೆ.

ಈಗ ನವರಾತ್ರಿ ಸಂದರ್ಭ ಹಿಂದುಗಳು ಮೀನು ತಿನ್ನಲು ಕೊಂಡೊಯ್ಯುವುದು ಕಡಿಮೆ. ಸಾಮಾನ್ಯವಾಗಿ ಈಗಿನ ತಾಜಾ ಬಂಗುಡೆ ಫ್ರೀಝಿಂಗ್‌ಗೆ ಕೊಂಡೊಯ್ಯುವುದು ವಾಡಿಕೆ.

ಈ ಬಾರಿ ಕೊಂಡೊಯ್ಯದೆ, ರಫ್ತೂ ಆಗದೆ ಬಂಗುಡೆ ದರ ನೆಲಕಚ್ಚಿದೆ. ರಫ್ತಾಗುವ ಬೊಂಡಾಸ್‌, ಕಪ್ಪೆ ಬೊಂಡಾಸ್‌ ಮಾತ್ರ ರಫ್ತಾಗುತ್ತಿದೆ” ಎನ್ನುತ್ತಾರೆ ಮೀನುಗಾರರ ಮುಖಂಡ ನಿತಿನ್‌ ಕುಮಾರ್‌.

ಆಗಸ್ಟ್‌, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಸಮುದ್ರ ತಂಪಾಗಿರುವಾಗ ಹೇರಳ ಪ್ರಮಾಣದಲ್ಲಿ ಮೀನು ಸಿಗುತ್ತಿದೆ. ಈ ಸಂದರ್ಭದಲ್ಲಿ ದರ ನೆಲಕಚ್ಚಿದರೆ ಬೋಟ್‌ನವರಿಗೆ ನಷ್ಟ. ನವೆಂಬರ್‌ ಬಳಿಕ ಬಿಸಿಲು ಏರಿದಂತೆ ಮೀನು ಆಳಕ್ಕೆ ಹೋಗಿ ಹೆಚ್ಚು ಸಿಗುವುದಿಲ್ಲ.

ಆಳಸಮುದ್ರ, ಟ್ರಾಲ್‌ ಬೋಟ್‌ ಮೀನುಗಾರಿಕೆ ಚೆನ್ನಾಗಿ ನಡೆಯುತ್ತಿದೆ. ನಿತ್ಯ ಹೋಗಿ ರಾಣಿ ಬಲೆ ಮತ್ತಿತರ ಮೀನುಗಾರರಿಗೆ ಮೀನು ಕಡಿಮೆ ಸಿಗುತ್ತಿದೆ. ತಮಿಳುನಾಡಿನಲ್ಲಿ ಪೊಟ್ಟಾಸ್‌ ಹಬ್ಬ ಮತ್ತು ರಾಜ್ಯದಲ್ಲಿ ನವರಾತ್ರಿ ಹಿನ್ನೆಲೆಯಲ್ಲಿ ಮೀನು ತಿನ್ನದೆ ಬೇಡಿಕೆ ಕಡಿಮೆಯಾಗಿದೆ.

ನಾನು 12 ಬಂಗುಡೆಯ ಒಂದು ಕೆಜಿ ಕೇವಲ 25 ರೂ.ಗೆ ಮಾರಾಟ ಮಾಡಿದ್ದೇನೆ. ಹೀಗಾದರೆ ನಮಗೆ ನಷ್ಟ” ಎಂದು ಮತ್ಸ್ಯೋದ್ಯಮಿ ಮೋಹನ್‌ ಬೆಂಗರೆ ಹೇಳುತ್ತಾರೆ.

ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನವರು ಮಾಂಸಾಹಾರ ಸೇವಿಸುವುದಿಲ್ಲ. ಈಗಿನ ಹೆಚ್ಚು ಮೀನು ಉತ್ಪಾದನೆ ಸಂದರ್ಭದಲ್ಲಿ ಕೆಲವು ವ್ಯಾಪಾರಿಗಳು ಖರೀದಿ ಮಾಡಿ, ದರ ಕಡಿಮೆಯಾಗುವಂತೆ ಮಾಡುತ್ತಾರೆ. ಇದರಿಂದ ಬೋಟ್‌ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ.

ಉಳಿದ ಎಲ್ಲದರ ಹೆಚ್ಚಳದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಮೀನುಗಾರರಿಗೆ ಯಾವುದೇ ಪ್ರಯೋಜನ ಸಿಗುತ್ತಿಲ್ಲ.

ಈ ಸಂದರ್ಭದಲ್ಲಿ ಸರಕಾರ ಬೇರೆ ಉತ್ಪನ್ನಗಳಂತೆ ದರ ನಿಗದಿ ಮಾಡಬೇಕು ಎಂದು ದಕ್ಷಿಣ ಕನ್ನಡ ಟ್ರಾಲ್‌ ಬೋಟ್‌ ಮೀನುಗಾರರ ಸಂಘದ ಅಧ್ಯಕ್ಷ ಚೇತನ್‌ ಬೆಂಗರೆ ಹೇಳಿದ್ರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button